ಮಂಗಳೂರು: ಪಡುಬಿದ್ರಿ ಸಮೀಪ ನಂದಿಕೂರು ಗ್ರಾಮದ ಮುದರಂಗಡಿ ಜಂಕ್ಷನ್ ಬಳಿ ವ್ಯಾಗನರ್ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ, ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರನ್ನು ಕಾವೂರು ಮೂಲದ ಪುರುಷೋತ್ತಮ ಆರ್. ಆಭ್ಯಂಕರ್ ಅವರ ಪತ್ನಿ ಸುಮಂಗಲಾ ಎಂ. (55) ಎಂದು ತಿಳಿದು ಬಂದಿದೆ.
ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರ್ ಚಲಾಯಿಸಿಕೊಂಡು ಹೋಗುವಾಗ ಅಪಘಾತ ಸಂಭವಿಸಿದೆ. ದಂಪತಿ ಮಾಳದಲ್ಲಿ ನಡೆಯಲಿದ್ದ ಉಪನಯನ ಕಾರ್ಯಕ್ರಮಕ್ಕೆ ಹೋಗುತ್ತಿದ್ದರೆಂದು ಸಂಬಂಧಿಕರು ತಿಳಿಸಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಸಹಜವಾಗಿ ವೇಗವಾಗಿಯೇ ಬರುತ್ತಿದ್ದ ಕಾರು ಒಮ್ಮೆಲೇ ರಸ್ತೆಯ ತೀರ ಎಡಕ್ಕೆ ಚಲಿಸಿ ಡಾಮರು ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿದು ರಸ್ತೆಯ ಬದಿಯಲ್ಲಿದ್ದ ಸಿಮೆಂಟ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.



