ಬಂಟ್ವಾಳ: ಬಂಟ್ವಾಳದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಕೊಂಚ ಹೆಚ್ಚಳವಾಗಿದ್ದು, ಸದ್ಯಕ್ಕೆ ನೀರಿನ ಮಟ್ಟ 6.1 ಮೀ.ನಷ್ಟಿದೆ. ಬಂಟ್ವಾಳದಲ್ಲಿ 8 ಮೀ. ಅಪಾಯಕಾರಿ ಮಟ್ಟವಾಗಿದ್ದು, 8.5 ಮೀ. ತಲುಪಿದರೆ ಪಾಣೆಮಂಗಳೂರಿನ ಆಲಡ್ಕ ಭಾಗದಲ್ಲಿ ಪ್ರವಾಹದ ನೀರು ಮನೆಯೊಳಗೆ ನುಗ್ಗುತ್ತದೆ.
ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವ ಪರಿಣಾಮ ನೀರಿನ ಮಟ್ಟ ಹೆಚ್ಚಳಗೊಂಡಿದೆ.

ನೀರು ಹೆಚ್ಚಳದಿಂದ ತುಂಬೆ ಡ್ಯಾಮ್ ಎಲ್ಲಾ ಗೇಟ್ ಗಳನ್ನು ತೆರವು ಮಾಡಿದರೆ ನೀರು ತೀರಾ ಇಳಿಕೆಯಾಗುವ ಸಾಧ್ಯತೆಯೂ ಇದೆ. ಉಪ್ಪಿನಂಗಡಿಯಲ್ಲೂ ನೀರಿನ ಮಟ್ಟ ಹೆಚ್ಚಳಗೊಂಡಿದೆ ಎನ್ನಲಾಗಿದೆ.
ನದೀ ತೀರದ ನಿವಾಸಿಗಳು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಅನಾವಶ್ಯಕವಾಗಿ ನದೀ ತೀರಕ್ಕೆ ತೆರಳುವುದು ಅಥವಾ ನೀರಿಗೆ ಇಳಿಯುವುದು ಸರಿಯಲ್ಲ ಎಂದು ಇಲಾಖೆ ಸೂಚಿಸಿದೆ.
ಜಿಲ್ಲೆಯಲ್ಲಿ ಅಷ್ಟಾಗಿ ಮಳೆಯಿಲ್ಲದಕಾರಣ ಸಂಜೆ ವೇಳೆ ನೀರಿನ ಹರಿವು ಇಳಿಮುಖವಾಗಬಹುದು.ಆದರೆ ಯಾವುದಕ್ಕೂ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಲಾಗಿದೆ.
ಅಧಿಕಾರಿಗಳು ನದಿ ತೀರಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ.



