ವಿಶ್ವ ಪರಿಸರ ದಿನದ ಅಂಗವಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಅಧೀನದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜು ನೇತೃತ್ವದಲ್ಲಿ ಕೊಲ್ಲೂರು ಮೂಕಾಂಬಿಕ ದೇವಳದ ಆವರಣದಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ‘ಕ್ಲೀನ್ ಸೌಪರ್ಣಿಕ ಗ್ರೀನ್ ಕೊಲ್ಲೂರು’ ಅಭಿಯಾನ ನಡೆಯಿತು. 
ಕಾರ್ಯಕ್ರಮವನ್ನು ಕೊಲ್ಲೂರು ದೇವಸ್ಥಾನದ ಮುಂಭಾಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಇವರು, ಮಕ್ಕಳಿಂದ ನಡೆಯುವ ಒಂದು ದಿನದ ಅಭಿಯಾನದಿಂದ ದೇಗುಲದ ಆವರಣ ಅಥವಾ ಸೌಪರ್ಣಿಕ ಸ್ವಚ್ಛವಾಗಿ ಉಳಿಯುವುದಿಲ್ಲ. ಆದರೆ ಮಕ್ಕಳ ಈ ಅಭಿಯಾನದಿಂದಾಗಿ ಜನರಿಗೆ ಜಾಗೃತಿ ಮೂಡುತ್ತದೆ. ಇಂತಹಾ ಜಾಗೃತಿಗೆ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಕ್ಷೇತ್ರದ ಆವರಣವನ್ನು ಸ್ವಚ್ಛವಾಗಿಡುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರವಾಗೋಣ ಎಂದಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕ ದೇಗಲುದ ಕಾರ್ಯನಿರ್ವಾಹಣಾ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಪೋಸ್ಟರ್ ಬಿಡುಗಡೆ ಅನಾವರಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಸುಬ್ರಮಣ್ಯ ಅಡಿಗ ಮಾತನಾಡಿದ್ದಾರೆ.



