ಖಾಸಗಿ ಸಂಸ್ಥೆಯ ವಿದ್ಯಾರ್ಥಿಗಳಿದ್ದ ದೇರಳಕಟ್ಟೆ ಜಂಕ್ಷನ್ನಿನಲ್ಲಿರುವ ಕಟ್ಟಡದಲ್ಲಿ ವಿದ್ಯುತ್ ಸರ್ಕ್ಯೂಟ್ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಕಟ್ಟಡದೊಳಗಿದ್ದ 140 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ.

ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ. ಸಂಜೆ 7.45ರ ಹೊತ್ತಿಗೆ ಕಟ್ಟಡದ ನೆಲಮಹಡಿಯಲ್ಲಿರುವ ಸ್ವಿಚ್ ಬೋರ್ಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಹರಡಲು ಆರಂಭವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯರು ಎದುರುಗಡೆಯಿದ್ದ ಪೆಟ್ರೋಲ್ ಪಂಪ್ ನಿಂದ ಬೆಂಕಿ ನಂದಿಸಲು ಉಪಯೋಗಿಸುವ ಸಾಮಗ್ರಿಗಳ ಸಹಾಯದಿಂದ ಬೆಂಕಿ ನಂದಿಸಲು ಆರಂಭಿಸಿದ್ದಾರೆ. ತಕ್ಷಣ ಕಟ್ಟಡದ ಮೇಲಿದ್ದ 140 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತಂದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ತಡವಾಗಿ ಆಗಮಿಸಿದ್ದರಿಂದಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ರು.

ಅದಾಗಲೇ ಬೆಂಕಿಯನ್ನು ನಂದಿಸುವಲ್ಲಿ ಸ್ಥಳೀಯರು ಸಫಲರಾಗಿದ್ದು, ವಿದ್ಯಾರ್ಥಿನಿಯರೆಲ್ಲರನ್ನೂ ಶಿಕ್ಷಣ ಸಂಸ್ಥೆ ಬೇರೆ ವಿದ್ಯಾರ್ಥಿನಿ ನಿಲಯಗಳಿಗೆ ಸ್ಥಳಾಂತರಿಸಿದ್ದಾರೆ. ವೇಣುಗೋಪಾಲ್ ಶೆಟ್ಟಿ ಎಂಬವರಿಗೆ ಸೇರಿದ ವೆಂಕಟ್ ರೆಸಿಡೆನ್ಸಿ ಐದು ಮಹಡಿಯ ಕಟ್ಟಡದ ಕೆಳಗಿನ ಮಹಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳ ಹಾಗೂ ಕೊಣಾಜೆ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.



