ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ ಮಾಣಿ-ಬೆಂಗಳೂರು ರಸ್ತೆಯ ಬೊಳ್ಳುಕಲ್ಲು ಎಂಬಲ್ಲಿ ನಡೆದಿದೆ.

ಚಾಲಕ ಕಡೇಶಿವಾಲಯ ನಿವಾಸಿ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಪ್ಪು ಕಲ್ಲಿನ ಕೆತ್ತನೆಯ ಕೆಲಸ ಮಾಡುತ್ತಿರುವ ರಂಜಿತ್ ಅವರು ಕಡೇಶಿವಾಲಯ ಮನೆಯಿಂದ ಶಂಭೂರು ಕಡೆಗೆ ಕಾರಿನಲ್ಲಿ ಹೋಗುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಕಾರು ಹೆದ್ದಾರಿಯಲ್ಲಿ ಪಲ್ಟಿಯಾದ ರಭಸಕ್ಕೆ ಸಂಪೂರ್ಣ ಜಖಂಗೊ0ಡಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ರಂಜಿತ್ ನನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡುಹೋಗಲಾಗಿದೆ.

ಈ ವೇಳೆ ಅತ ಮಾತನಾಡಿದ್ದು, ಬೆಳಿಗ್ಗೆ ಲಾರಿ ಅಪಘಾತದಲ್ಲಿ ಮೃತರಾದ ಚಿದಾನಂದ ಅವರ ಮನೆಗೆ ತೆರಳುವುದಾಗಿ ತಿಳಿಸಿದ್ದು, ಕಾರಿನ ಗ್ಲಾಸ್ ಮೇಲೆ ವಿರುದ್ದ ದಿಕ್ಕಿನಲ್ಲಿ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಚೆಲ್ಲಿದ್ದು ನಿಯಂತ್ರಣ ಕಳೆದುಕೊಂಡಿತು ಎಂದು ಹೇಳಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಸತ್ಯಸಂಗತಿ ಪೋಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ. ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.



