ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಾಮಗೌಡನಹಳ್ಳಿ ಗ್ರಾಮದ ಸೋಮಶೇಖರ್ರವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

ನಂತರ ಗ್ರಾಮಸ್ಥರ ಕೂಗಾಟದಿಂದ ಗಾಬರಿಗೊಂಡು ಪರಾರಿಯಾಗಿದೆ. ವಾರದ ಹಿಂದಷ್ಟೆ ಇದೆ ಗ್ರಾಮದ ರೈತರ ಎರಡು ಹಸುಗಳು ಹುಲಿಗೆ ಬಲಿಯಾಗಿದ್ದವು, ಹೀಗೆ ಒಂದರ ಮೇಲೊಂದು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆದು ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದರೂ ಅರಣ್ಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದಕ್ಕೆ ಪರಿಹಾರ ಕಂಡುಕೊಡುವಲ್ಲಿ ವಿಫಲವಾಗಿದ್ದಾರೆ ಎಂದು ಯುವ ರೈತ ಮುಖಂಡ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಹನಗೋಡು ಹೋಬಳಿಯ ಕಾಡಂಚಿನ ಗ್ರಾಮಗಳಾದ ಹನಗೋಡು, ಬಿ.ಆರ್ ಕಾವಲು, ಕಾಮಗೌಡನಹಳ್ಳಿ, ನೇಗತ್ತೂರು, ದೊಡ್ಡಕಟ್ಟೆ ಹೆಮ್ಮಿಗೆ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾಕು ಪ್ರಾಣಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹುಲಿ ಹಾಗೂ ಚಿರತೆ ದಾಳಿಯಿಂದ ಬೇಸತ್ತು ತಾಲ್ಲೂಕಿನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.



