ಎಲ್ಲರ ಬಾಳಲ್ಲೂ ಮದುವೆ ಅನ್ನೋದು ಸಂಭ್ರಮದ ದಿನ. ಈ ದಿನಕ್ಕಾಗಿ ವರ್ಷಾನುಗಟ್ಟಲೇ ಕನಸು ಕಂಡಿರುತ್ತಾರೆ. ಆ ಒಂದು ದಿನಕ್ಕಾಗಿ ಗಂಡು-ಹೆಣ್ಣು ಕನಸಿನ ಸರಮಾಲೆಯನ್ನೇ ಕಟ್ಟಿಕೊಂಡಿರುತ್ತಾರೆ. ಆದ್ರೆ ಜವರಾಯನ ಆಟದ ಮುಂದೆ ಯಾವುದು ಶಾಶ್ವತ ಅಲ್ಲ ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ಶಿವಮೊಗ್ಗದ ಭದ್ರಾವತಿಯ ಹನುಮಂತಪುರ ವಾಸಿ ರಮೇಶ್ ಹರಪನಹಳ್ಳಿಯ ಬಂಡಿ ಮೂಲದ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆ ಆಗಿ 24 ಗಂಟೆ ಕಳೆಯುವ ಮೊದಲೇ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ. ಶಿವಮೊಗ್ಗದ ಭದ್ರಾವತಿಯ ಹನುಮಂತಪುರ ನಿವಾಸಿ ಮೃತ ರಮೇಶ್ಗೆ ಹರಪನಹಳ್ಳಿಯ ಬಂಡಿ ಮೂಲದ ಯುವತಿ ಜೊತೆ ನವೆಂಬರ್ 30ರಂದು ಶಿವಮೊಗ್ಗದಲ್ಲಿ ವಿವಾಹ ನೆರವೇರಿರುತ್ತೆ. ಮದುವೆ ಬಳಿಕ ಆರತಕ್ಷತೆಗಾಗಿ ಮೃತ ರಮೇಶ್ ಬಂಡ್ರಿಗೆ ತೆರಳಿರುತ್ತಾರೆ. ಈ ವೇಳೆ ದೇವಸ್ಥಾನದಿಂದ ಮನೆವರಿಗೂ ವಧು-ವರರ ಮೆರವಣಿಗೆ ನಡೆದು ನವ ದಂಪತಿ ದೇವರ ದರ್ಶನ ಪಡೆಯಲು ಹೋಗ್ತಿರ್ತಾರೆ. ಇನ್ನೇನು ದೇವರಿಗೆ ಕೈ ಮುಗಿದು ವಾಪಸ್ ಮನೆಗೆ ತೆರಳುವಾಗ ರಮೇಶ್ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತದೆ. ಆದ್ರೆ, ಅಷ್ಟರಲ್ಲೇ ಹೃದಯಾಘಾತದಿಂದ ರಮೇಶ್ ಸಾವನ್ನಪ್ಪಿದ್ದಾನೆ.



