ಅಮೃತ ಭಾರತ ಯೋಜನೆಯಡಿ ನವೀಕರಣಗೊಳ್ಳುತ್ತಿರುವ ಬಂಟ್ವಾಳ ರೈಲ್ವೆ ನಿಲ್ದಾಣದ ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣದ ಕಂಪೌಂಡ್ನ ಕಲ್ಲುಗಳು ಕುಸಿದಿರುವುದು ಕಂಡುಬಂದಿದೆ. ಇದನ್ನು ಯಾರಾದರೂ ಉದ್ದೇಶ ಪೂರ್ವಕವಾಗಿ ಕೆಡವಿದರೋ ಅಥವಾ ಕಳಪೆ ಕಾಮಗಾರಿಯಿಂದಾಗಿ ಹೀಗಾಯಿತೋ ಎಂಬ ಅನುಮಾನ ಮೂಡುವಂತೆ ಈ ವಿಡಿಯೋದಲ್ಲಿರುವ ದೃಶ್ಯಗಳು ಕಂಡುಬರುತ್ತಿವೆ.

ಕೋಟಿಗಟ್ಟಲೆ ಖರ್ಚು ಮಾಡಿ ಮರು ನಿರ್ಮಾಣವಾಗುತ್ತಿರುವ ಬಂಟ್ವಾಳ ರೈಲ್ವೆ ನಿಲ್ದಾಣದ ಕೆಲಸ ಕಾರ್ಯಗಳ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಮಾಡಿದ್ದು, ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಹಾಜರಿದ್ದಾರೆ. ಇದೀಗ ಈ ಭಾಗದ ರೈಲ್ವೆ ಸುರಕ್ಷಾ ಸಮಿತಿ, ಸಲಹಾ ಸಮಿತಿಯ ಸದಸ್ಯರು ಹಾಗೂ ಸಂಬಂಧಪಟ್ಟ ಶಾಸಕರು, ಸಂಸದರು ಕಾಮಗಾರಿ ವೀಕ್ಷಿಸಿ ಇದರ ಗುಣಮಟ್ಟವನ್ನು ಸಂಬಂಧಪಟ್ಟವರಿಂದ ಪರಿಶೀಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಒಂದು ವೇಳೆ ಕಿಡಿಗೇಡಿಗಳೇನಾದರೂ ಇಂಥ ಕೃತ್ಯವೆಸಗಿದರೆ, ಅವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.



