ಪೆರ್ಲ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೇತಾಜಿ ಸಾರ್ವಜನಿಕ ಗ್ರಂಥಾಲಯದ ಆಯೋಜನೆಯಲ್ಲಿ ‘ರಾಷ್ಟ್ರೀಯ ಭಾವೈಕ್ಯತಾ ಕಾವ್ಯಲಹರಿ -2023’ ಎಂಬ ವಿಶಿಷ್ಟ ಕಾರ್ಯಕ್ರಮವು ಜರಗಿತು.
‘ಎಣ್ಮಕಜೆ ಗ್ರಾಮ ಪಂಚಾಯತ್ ಹಾಲ್’ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಡಿ ಸಾಮಾಜಿಕ ಪರಿವರ್ತನೆ ಆಗಬೇಕಾಗಿದೆ. ಬಾಲ್ಯದಿಂದಲೇ ಅದಕ್ಕೆ ತಕ್ಕುದಾದ ಪರಿಸರ ನಿರ್ಮಾಣವಾಗಬೇಕು. ಸಾಹಿತ್ಯ, ಓದು, ಬೆಳವಣಿಗೆಗೆ ಸಹಕಾರಿ. ಅದಕ್ಕಾಗಿ ಭಾವಿ ಜನಾಂಗವನ್ನು ಗ್ರಂಥಾಲಯಗಳತ್ತ ಆಕರ್ಷಿಸಬೇಕು ಎಂದು ಕರೆನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಹಿತಿ, ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಎಸ್ ಎನ್ ಭಟ್ ಸೈಪಂಗಲ್ಲು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಪಣವಾಗಿಟ್ಟ ಚೇತನಗಳನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ. ಇಂದು ನಾವು ಸ್ವತಂತ್ರ ಭಾರತದಲ್ಲಿ ಭಾವೈಕ್ಯತೆಯಿಂದ ಬದುಕುತ್ತಿದ್ದೇವೆಂದರೆ ಅದಕ್ಕೆ ಅವರೆಲ್ಲರ ತ್ಯಾಗ, ಬಲಿದಾನಗಳೇ ಕಾರಣ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಸರಗೋಡು ಪಬ್ಲಿಕ್ ಪ್ರಾಸಿಕ್ಯೂಟರ್ ಚಂದ್ರಮೋಹನ್ ಕಾಟುಕುಕ್ಕೆ ವಿದ್ಯಾಭ್ಯಾಸ ಮನುಷ್ಯನನ್ನು ಅಳೆಯುವ ಮಾನದಂಡ ಅಲ್ಲ. ಬರಹದ ಮೂಲಕ ವ್ಯಕ್ತಿಗಳನ್ನು ಬದಲಾಯಿಸಲು ಸಾಧ್ಯವಿದೆ. ಆಮೂಲಕ ಒಂದು ಒಳ್ಳೆಯ ಸಮಾಜವನ್ನು ಕಟ್ಟಬಹುದು ಎಂದು ಅಭಿಪ್ರಾಯಪಟ್ಟರು.
ಬಳಿಕ ಆನಂದ ರೈ ಅಡ್ಕಸ್ಥಳ ಚಾಲನೆ ನೀಡಿದ ಕಾವ್ಯಲಹರಿಯಲ್ಲಿ ನವ್ಯಶ್ರೀ ಸ್ವರ್ಗ, ಮೇಘಶ್ರೀ ಪುತ್ತಿಗೆ, ಹಿತೇಶ್ ಕುಮಾರ್ ಎ. ನೀರ್ಚಾಲು, ಚಂದ್ರಕಲಾ ನೀರಾಳ, ರಂಜಿತಾ ಪಿ. ಪಟ್ಟಾಜೆ, ಶ್ರೀನಿವಾಸ ನಾಯ್ಕ್ ಪೆರಿಕ್ಕಾನ, ಜನಾರ್ದನ ನಾಯ್ಕ್ ಬೊಟ್ಟಾರಿ, ಸುಜಿತ್ ಕುಮಾರ್ ಬೇಕೂರು, ನಿರ್ಮಲಾ ಶೇಷಪ್ಪ ಖಂಡಿಗೆ, ಪ್ರಿಯಾ ಬಾಯಾರ್ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು.

ಬದಿಯಡ್ಕ ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಮ ಪಟ್ಟಾಜೆ, ಸಮತಾ ಸಾಹಿತ್ಯ ವೇದಿಕೆ ಸಂಚಾಲಕ ಸುಂದರ ಬಾರಡ್ಕ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಉದಯ ಸಾರಂಗ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನೇತಾಜಿ ಸಾರ್ವಜನಿಕ ಗ್ರಂಥಾಲಯ ಅಧ್ಯಕ್ಷರಾದ ರಾಮಕೃಷ್ಣ ರೈ ಕುದ್ವ ವಂದಿಸಿ, ಕಾರ್ಯದರ್ಶಿ ವನಜಾಕ್ಷಿ ಪಿ ಚೆಂಬ್ರಕಾನ ನಿರೂಪಿಸಿದರು.







