ನಟ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಆಂಧ್ರಪ್ರದೇಶ ಪೊಲೀಸರು ಅನುಮಂಚಿಪಲ್ಲಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಚಂದ್ರಬಾಬು ಅವರನ್ನು ಭೇಟಿ ಮಾಡಲು ರಸ್ತೆ ಮೂಲಕ ವಿಜಯವಾಡಕ್ಕೆ ತೆರಳುವಾಗ ಗರಿಕಪಾಡು ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದಾರೆ.

ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮುಂದುವರಿಯಲು ಬಿಡದ ಕಾರಣ, ಪೊಲೀಸರ ವರ್ತನೆಯನ್ನು ವಿರೋಧಿಸಿ ಪವನ್ ರಸ್ತೆಯಲ್ಲೇ ಮಲಗಿದ್ದಾರೆ. ಪವನ್ ಕಲ್ಯಾಣ್ ಹಿಂದೆ ಸರಿಯದ ಕಾರಣ ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರೆ. 2014ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಕೆಲವೇ ಕೆಲವು ತಿಂಗಳ ಬಳಿಕ ಚಂದ್ರಬಾಬು ನಾಯ್ಡು ಒಂದು ಮಹತ್ವಾಕಾಂಕ್ಷಿ ಯೋಜನೆ ಘೋಷಿಸುತ್ತಾರೆ. ಆ ಯೋಜನೆಯ ಉದ್ದೇಶ, ನಿರುದ್ಯೋಗಿಗಳಲ್ಲಿ ಕೌಶಲ್ಯ ಅಭಿವೃದ್ಧಿಪಡಿಸೋದು. ಇದಕ್ಕಾಗಿ ಚಂದ್ರಬಾಬು ನಾಯ್ಡು ಕೌಶಲಭಿವೃದ್ಧಿ ನಿಗಮವನ್ನ ಸ್ಥಾಪಿಸಿದರು. ಆರಂಭದಲ್ಲಿ ಚಂದ್ರಬಾಬು ನಾಯ್ಡು ಸೀಮನ್ ಇಂಡಿಯಾ ಕಂಪನಿಯ ಜೊತೆ ಎಂಓಯು ಮಾಡಿಕೊಂಡಿತು. ಈ ಪ್ರಾಜೆಕ್ಟ್ನ ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸೋದಾಗಿ ಹೇಳಿದ ಚಂದ್ರಬಾಬು ನಾಯ್ಡು, ರಾಜ್ಯಾದ್ಯಂತ ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದರು.
ಎಂಓಯು ಪ್ರಕಾರ, ಯೋಜನೆಯ ಒಟ್ಟು ವೆಚ್ಚ, 3,356 ಕೋಟಿ ರೂಪಾಯಿ. ಈ ಪೈಕಿ ಶೇ.10ರಷ್ಟನ್ನ ರಾಜ್ಯ ಸರ್ಕಾರ ಭರಿಸೋದು, ಉಳಿದ ಹಣವನ್ನ ಸೀಮೆನ್ಸ್ ಕಂಪನಿ ಬಂಡವಾಳ ಹೂಡಬೇಕಿತ್ತು. ಎಲ್ಲ ಅಂದುಕೊಂಡಂತೆ ನಡೆಯಿತು. 2015, ಜನವರಿ 19ರಂದು, ಚಂದ್ರಬಾಬು ನಾಯ್ಡು ವರ್ಚುವಲಿ, 17 ಸ್ಕಿಲ್ ಡೆವಲಪ್ಮೆಂಟ್ ಕೇಂದ್ರಗಳನ್ನ ಉದ್ಘಾಟಿಸಿದರು. ಇದಾದ ನಂತರ ಚಂದ್ರಬಾಬು ನಾಯ್ಡು ಸರ್ಕಾರ ಪತನವಾಗಿ , ಜಗನ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಮಾರ್ಚ್ 2021ರಂದು ಅಸೆಂಬ್ಲಿಯಲ್ಲಿ ಮುಖ್ಯಮಂತ್ರಿ ಜಗನ್ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರ ರೂವಾರಿಯೇ ಚಂದ್ರಬಾಬು ನಾಯ್ಡು ಅಂತಾ ಆರೋಪಿಸಿದರು. ಪ್ರಾಥಮಿಕ ತನಿಖೆಯ ನಂತರ, ಆಂಧ್ರಪ್ರದೇಶದ ಸಿಐಡಿ ಡಿಸೆಂಬರ್ 9, 2021ರಲ್ಲಿ ಎಫ್ಐಆರ್ ದಾಖಲಿಸಿತು. ಅಲ್ಲಿಂದ ಆಟ ಶುರುವಾಯ್ತು. ಜಗನ್ ಅವರ ಮುಖ್ಯ ಆರೋಪ ಏನಂದ್ರೆ, ಯೋಜನೆ ಜಾರಿಯಾದ ಕೇವಲ ಮೂರೇ ತಿಂಗಳಲ್ಲಿ ಚಂದ್ರಬಾಬು ನಾಯ್ಡು ಅವರು 371 ಕೋಟಿ ರೂಪಾಯಿಯನ್ನ ಅವಸರವಾಗಿ ಬಿಡುಗಡೆ ಮಾಡಿದರು. ಆಗ ಸೀಮನ್ ಕಂಪನಿ ಬಂಡವಾಳ ಹೂಡಿಕೆ ಮಾಡೋ ಮುನ್ನವೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿತ್ತು ಆರೋಪಿಸಿದೆ. ಬಿಡುಗಡೆಯಾದ ಹಣಕ್ಕೆ ಕಂಪನಿಗಳು ಕಂಪ್ಯೂಟರ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನ ನೀಡಬೇಕಿತ್ತು. ಆದ್ರೆ, ನಕಲಿ ಬಿಲ್ ಸೃಷ್ಟಿಸಿಕೊಂಡು ಹಣ ಕೊಳ್ಳೆ ಹೊಡೆಯಲಾಗಿದೆ ಅನ್ನೋದು ಚಂದ್ರಬಾಬು ನಾಯ್ಡು ಅವರ ಮೇಲಿರೋ ಆರೋಪವಾಗಿದೆ.



