ಬಂಟ್ವಾಳ : ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಸೋಮವಾರ ಮುಂಜಾನೆ ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.


ಮೃತರನ್ನು ಸೂರಿಕುಮೇರ್ ನಿವಾಸಿ ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್ಲೈಸಿ ಏಜೆಂಟ್ ನಾರಾಯಣ ಕುಲಾಲ್ ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ 5 ರ ವೇಳೆಗೆ ಪರ್ಲೊಟ್ಟು ಎಂಬಲ್ಲಿನ ಕೆರೆಯ ಬಳಿ ಬೈಕ್, ಮೊಬೈಲ್, ಚಪ್ಪಲಿಯನ್ನು ನೋಡಿದ ಸ್ಥಳೀಯರು ಯಾರೋ ಕೆರೆಗೆ ಹಾರಿ ಆತ್ಮಹತ್ಯೆ ಗೈದಿರಬೇಕು ಎಂಬ ಸಂಶಯದಿಂದ ವಿಟ್ಲ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ.


ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಅಲ್ಲಿ ಸೇರಿದವರು ಮೃತನನ್ನು ಗುರುತಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪ್ರಥಮ ನೋಟದಲ್ಲಿ ಇದು ಆತ್ಮಹತ್ಯೆ ಎಂದು ಕಂಡುಬಂದರೂ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.



