ಕಟೀಲು : ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳಲು ಸೂಕ್ತ ವೇದಿಕೆ ಕಲ್ಪಿಸಿದಾಗ ಅವು ಅನಾವರಣಗೊಂಡು ಮಕ್ಕಳಲ್ಲಿರುವ ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಸಹಕಾರಿಯಾಗುತ್ತದೆ

ಈ ನಿಟ್ಟಿನಲ್ಲಿ ಸತತ ಏಳು ವರುಷಗಳಿಂದ ಪುನರೂರು ಪ್ರತಿಷ್ಠಾನವು ಪ್ರತಿಭಾ ಸೌರಭದ ಮೂಲಕ ಪ್ರೌಢಶಾಲಾ ಮಕ್ಕಳಿಗೆ ಅವಕಾಶ ನೀಡುತ್ತಿದ್ದು,ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದೊಂದು ವರದಾನವಾಗಿದೆ ಎಂದು ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣರು ಪುನರೂರು ಪ್ರತಿಷ್ಠಾನ ಇದರ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿ ಇದರ ಸಹಕಾರದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹಿಸುವ ಸಲುವಾಗಿ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಜರುಗಿದ ಪ್ರತಿಭಾ ಸೌರಭ- 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಇವರು ಅಧಕ್ಷತೆ ವಹಿಸಿದ್ದರು. ಬಂಟರ ಸಂಘ ಮೂಲ್ಕಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿಯ ಯುಗಪುರುಷ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಅಧ್ಯಕ್ಷರಾದ ಲ. ಸುಧೀರ್ ಬಾಳಿಗ, ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷರಾದ ಶೋಭಾ ರಾವ್ ಹಾಗೂ ಪದಾಧಿಕಾರಿಗಳಾದ ಗೀತಾ ಶೆಟ್ಟಿ, ದಾಮೋದರ ಶೆಟ್ಟಿ ಕೊಡೆತ್ತೂರು, ಶಶಿಕರ ಕೆರೆಕಾಡು, ಅಕ್ಷತಾ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು ಪ್ರಾಸ್ತಾವಿಸಿ, ಸ್ವಾಗತಿಸಿದರು, ಪ್ರಾಣೇಶ ಭಟ್ ದೇಂದಡ್ಕ ವಂದಿಸಿದರು ಹಾಗೂ ಜಿತೇಂದ್ರ ವಿ.ರಾವ್ ಹೆಜಮಾಡಿ ನಿರೂಪಿಸಿದರು.
ಮೂಲ್ಕಿ ತಾಲೂಕಿನ ಒಟ್ಟು 24 ಪ್ರೌಢಶಾಲೆಯ 405 ವಿದ್ಯಾರ್ಥಿಗಳು ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಕಸದಿಂದರಸ ಸ್ಪರ್ಧೆಯಲ್ಲಿ ಭಾಗವಹಿಸಿದರು.



