ಶಿವಮೊಗ್ಗ : ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ 12 ಬೇಡಿಕೆಗಳನ್ನು ಇಟ್ಟುಕೊಂಡು ರೈತ ಸಂಘಟನೆಗಳು ಹಮ್ಮಿಕೊಂಡಿರುವ ‘ದಿಲ್ಲಿ ಚಲೋ’ ಹೋರಾಟಕ್ಕೆ ಆಗಮಿಸುವ ಅನ್ನದಾತನ ಹಾದಿಗೆ ಮುಳ್ಳುತಂತಿ, ಮೊಳೆಗಳ ಪಟ್ಟಿ, ಸಿಮೆಂಟ್ ಇಟ್ಟಿಗೆ ಇರಿಸಿದ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ವಕ್ತಾರ ಎಂ.ರಮೇಶ್ ಶೆಟ್ಟಿಯವರು ತಿಳಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ದೆಹಲಿಯ ಗಡಿಭಾಗಗಳಿಗೆ ಬೇಲಿ ಹಾಕಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸದೇ ಬಂಧಿಸಿ, ಬೆದರಿಸಿ ದೇಶದ ಬೆನ್ನುಲಬಾಗಿರುವ ರೈತರನ್ನು ಬಗ್ಗು ಬಡಿಯಬಹುದೆಂದು ತಿಳಿದಿದ್ದರೆ ಅದು ಅವರ ಭ್ರಮೆ. ನಾವು ಖರೀದಿಸುವ ಟಿವಿ, ಮೊಬೈಲ್, ವಾಷಿಂಗ್ ಮಿಷನ್, ಪೇಸ್ಟ್, ಕೂಲ್ ಡ್ರಿಂಕ್ಸ್ ಗಳಿಗೆ ಇಂತಿಷ್ಷೇ ಎಂದು ಬೆಲೆ ಎಂದು ನಿಗದಿ ಮಾಡಲಾಗುತ್ತದೆ. ಅದೇ ಪ್ರತಿಯೊಬ್ಬ ವ್ಯಕ್ತಿ ಜೀವಿಸಲು ಬೇಕಾಗಿರುವ ಅನ್ನ ನೀಡುವ ರೈತರ ಬೆಳೆಗಳಿಗೆ ಕನಿಷ್ಠ ಬೆಲೆ ನಿಗದಿ ಪಡಿಸಿ ಎಂದು ಕೇಳುವ ಹಕ್ಕು ನಮ್ಮ ದೇಶದ ರೈತರಿಗಿದೆ ಎಂದರು.
ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಬಹುದಿನಗಳ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವುದಾಗಿ ಘೋಷಣೆ ಮಾಡಿದ್ದಾರಲ್ಲದೇ, ಸ್ವಾಮೀನಾಥನ್ ವರದಿಯನ್ನು ಜಾರಿಗೆ ತರುವ ಕಿಸಾನ್ ಗ್ಯಾರಂಟಿ ಘೋಷಿಸಿದ್ದಾರೆ. ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಐಎನ್ ಡಿಐಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮೊದಲ ದಿನವೇ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಲಾಗುವುದೆಂದು ತಿಳಿಸಿದ್ದಾರೆ ಎಂದ ರಮೇಶ್ ಇವರು ರೈತರ ಹೋರಾಟಕ್ಕೆ ಈಗಾಗಲೇ ನಮ್ಮ ಪಕ್ಷ ಹಾಗೂ ನಾಯಕರುಗಳು ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದಾರೆಂದರು.



