ಬೆಳ್ತಂಗಡಿ: ಅತಿವೇಗ ಹಾಗೂ ನಿರ್ಲಕ್ಯದ ಚಾಲನೆಯ ಹಿನ್ನಲೆ ಸರಣಿ ಅಪಾಘಾತ ನಡೆದಿದ್ದು ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಟಿಪ್ಪರ್ ಚಾಲಕನ ಅತಿವೇಗದ, ನಿರ್ಲಕ್ಷ್ಯದ ಚಾಲನೆಯಿಂದ ಎರಡು ಬಸ್, ನಾಲ್ಕು ಕಾರು, ಒಂದು ಆಟೋ ರಿಕ್ಷಾ ಮತ್ತು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದಿದೆ.
ಉಜಿರೆಯಿಂದ ಗುರುವಾಯನಕೆರೆ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಎದುರಿನಿಂದ ಸಂಚರಿಸುತ್ತಿದ್ದ ಬಸ್ ಗೆ ಡಿಕ್ಕಿ
ಹೊಡೆದಿದೆ. ನಂತರ ಇನ್ನೊಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಎರಡನೆ ಬಾರಿ ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಏಕಾಏಕಿ ಶೋರೂಂ ಕಡೆಗೆ ತಿರುಗಿ ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ಶೋರೂಂ ಎದುರು ನಿಲ್ಲಿಸಿದ್ದ ನಾಲ್ಕು ಕಾರು ಹಾಗೂ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಬಳಂಜ ಗ್ರಾಮದ ಗುಂಡೇರಿ ನಿವಾಸಿಯಾದ ವೀಕ್ಷಾ (17) ಎಂದು ಗುರುತಿಸಲಾಗಿದೆ. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ವೀಕ್ಷಾ ತನ್ನ ಸ್ನೇಹಿತೆಯೊಂದಿಗೆ ಕಂಪ್ಯೂಟರ್ ತರಗತಿಗೆ ಹಾಜರಾಗಲು ನಡೆದುಕೊಂಡು ಹೋಗುತ್ತಿದ್ದಳು. ಮತ್ತೋರ್ವ ಬಾಲಕಿ ಟಿಪ್ಪರ್ನ ಚಕ್ರದಡಿ ಸಿಲುಕಿ ಕೂದಲೆಳೆಯಂತರದಲ್ಲಿ ಪಾರಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟಿಪ್ಪರ್ ಚಾಲಕ ಸುರೇಶ್ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.



