ಸವಣೂರು: ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ (Recognised Unaided Private Schools’ Association of Karnataka) ಪ್ರಶಸ್ತಿಯು ಸವಣೂರಿನ ಶಿಲ್ಪಿ, ಸಹಕಾರ ರತ್ನ ಸವಣೂರು ಸೀತಾರಾಮ ರೈಯವರಿಗೆ ಒಲಿದು ಬಂದಿದೆ.

ಅಕ್ಟೋಬರ್ 21ರಂದು ಬೆಂಗಳೂರಿನ ಜುಬ್ಲಿ ಅಂತರರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ
ಸವಣೂರು ಸೀತಾರಾಮ ರೈ ಅವರು ಸವಣೂರಿನಲ್ಲಿ 2001 ರಲ್ಲಿ ವಿದ್ಯಾರಶ್ಮಿ ವಿದ್ಯಾಲಯ ಸ್ಥಾಪನೆ ಮಾಡಿದ್ದು, ಆರಂಭದ ಹಂತದಲ್ಲಿ ಎಲ್ ಕೆಜಿಯಿಂದ ಪಿಯುಸಿ ತನಕ ಶಿಕ್ಷಣ ಆರಂಭಿಸಿದರು. 2012 ರಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಸ್ಥಾಪನೆ ಮಾಡಿದ್ದಾರೆ. ಸವಣೂರಿನ ಗ್ರಾಮೀಣ ಪ್ರದೇಶದಲ್ಲಿ ಸುಮಾರು 27 ಎಕ್ರೆ ಜಾಗದಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಬಳಿಕ ಡಿಎಡ್ ಹಾಗೂ ನರ್ಸಿಂಗ್ ಕೋರ್ಸ್ ಆರಂಭಿಸಿದ್ದರು. ಪ್ರಸ್ತುತ ಈ ಕೋರ್ಸ್ ಗಳು ನಿಂತಿವೆ. ಪ್ರಸ್ತುತ ಕೆ.ಜಿ., ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಮಟ್ಟದ ಶಿಕ್ಷಣಗಳನ್ನು ನೀಡುತ್ತಿದ್ದಾರೆ. ಸುಮಾರು 850 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು 65 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. 220 ಹುಡುಗರು ಮತ್ತು 180 ಹುಡುಗಿಯರು, ಒಟ್ಟು 400 ಮಕ್ಕಳಿಗೆ ಆಗುವಷ್ಟು ವಸತಿ ನಿಲಯದ ವ್ಯವಸ್ಥೆ ಇದೆ.



