ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಜಲ ಜೀವನ್ ಮಿಷನ್ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಕುಡಿಯುವ ನೀರನ್ನು ದುರ್ಬಳಕೆ ಮಾಡದೇ ಮಿತವಾಗಿ ಬಳಸಿ ಪ್ರತೀ ಮನೆಗಳಿಗೆ ತಲುಪುವಂತೆ ಹಾಗೂ ದುರ್ಬಳಕೆ ಮಾಡುವವರ ಮೇಲೆ ಗ್ರಾಮ ಪಂಚಾಯತ್ಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೇಳಿದರು.

ಅವರು ನ.7 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಜಲಜೀವನ್ ಮಿಷನ್ ಯೋಜನೆಯಡಿ ಐಇಸಿ/ಹೆಚ್.ಆರ್.ಡಿ ಚಟುವಟಿಕೆಗಳನ್ನು ನಡೆಸಲು ಗ್ರಾಮ ಪಂಚಾಯತ್ಗಳ ನೀರು ಮತ್ತು ನೈರ್ಮಲ್ಯ ಸಮಿತಿಯ ಮಹಿಳಾ ಸದಸ್ಯರಿಗೆ ಒಂದು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಮನೆಗೆ ಅಗತ್ಯ ಕುಡಿಯುವ ನೀರನ್ನು ಪೂರೈಸುವುದು ಹಾಗೂ ನಳ್ಳಿ ನೀರಿನ ಮಾಸಿಕ ಬಿಲ್ಲು ವಸೂಲಾತಿಯನ್ನು ಕಡ್ಡಾಯವಾಗಿ ನಿರ್ವಹಿಸುವ ಜವಾಬ್ದಾರಿ ಈ ಸಮಿತಿಯದ್ದಾಗಿದೆ ಎಂದು ತಿಳಿಸಿದರು.
ತಾ.ಪಂ. ಸಹಾಯಕ ನಿರ್ದೇಶಕರು (ಗ್ರಾ.ಉ.) ಶೈಲಜಾ ಎ ಇಲಾಖಾ ಮಾಹಿತಿಯನ್ನು ನೀಡಿದರು.
ಜಲಜೀವನ್ ಮಿಷನ್ ಜಿಲ್ಲಾ ಸಂಯೋಜಕರಾದ ಶಿವರಾಮ್, ಸುರೇಶ್, ಚರಣ್, ಅಶ್ವಿತ ತರಬೇತಿ ನೀಡಿದರು.
ಈ ಸಂದರ್ಭ ಬಲ್ನಾಡು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ, ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರರ ಕುಶ ಕುಮಾರ್ ವೇದಿಕೆಯಲ್ಲಿದ್ದರು.
ತಾ.ಪಂ. ವಿಷಯ ನಿರ್ವಾಹಕರಾದ ಸುರೇಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.



