ಪೊಲೀಸರಿಗೆ ದೂರು ನೀಡಿದ ದ್ವೇಷದಿಂದ ದುಷ್ಕರ್ಮಿಯೋರ್ವ ಅಂಗಡಿಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೇಡಡ್ಕ ನಿವಾಸಿ ರಮಿತಾ ( 22) ಮೃತ ಮಹಿಳೆ ಎಂದು ತಿಳಿದು ಬಂದಿದೆ. ತಮಿಳುನಾಡು ಮೂಲದ ರಾಮಕೃತ (57) ಬೆಂಕಿ ಹಚ್ಚಿದ ಆರೋಪಿಯಾಗಿದ್ದಾನೆ.
ಮೃತ ರಮಿತಾ ಬೇಡಡ್ಕದ ಮನ್ನಡ್ಕ ಎಂಬಲ್ಲಿ ಅಂಗಡಿ ನಡೆಸುತ್ತಿದ್ದರು. ಆರೋಪಿ ರಾಮಕೃತ ಪಾನಮತ್ತನಾಗಿ ಬಂದು ಆಕೆಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದನು. ಈ ಬಗ್ಗೆ ರಮಿತಾ ಬೇಡಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದೇ ಕಾರಣಕ್ಕೆ ವೈಷಮ್ಯದಿಂದ ಎ.8 ರಂದು ಸಂಜೆ 3 ಗಂಟೆಗೆ ಅಂಗಡಿಯೊಳಗೆ ನುಗ್ಗಿದ ಆರೋಪಿ ಯುವತಿಗೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದನು. ಕೃತ್ಯ ನಡೆಸಿ ಪರಾರಿಯಾಗಲೆತ್ನಿಸಿದ್ದ ಆರೋಪಿಯನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.



