ಮೇ 1 ರಂದು ರಾತ್ರಿ ಬಜ್ಪೆ ಸಮೀಪ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಪ್ರಕರಣದ ಬಗ್ಗೆ ಸರಿಯಾದ ತನಿಖೆನಡೆಯುತ್ತಿಲ್ಲ ಎಂದು ವ್ಯಗ್ರರಾಗಿರುವ ಕರಾವಳಿಯ ಬಿಜೆಪಿ ಶಾಸಕರು ಮತ್ತು ಸಂಸದರು ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದಾರೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಪದೇ ಪದೇ ರೌಡಿ ಶೀಟರ್ ಎಂದು ಬಿಂಬಿಸುತ್ತಿರುವುದಕ್ಕೆ ಬಿಜೆಪಿ ಆರಂಭದಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇದಲ್ಲದೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದವರೇ ಆರೋಪಿಗಳಾಗಿ ಬಂಧಿತರಾಗಿದ್ದಾರೆ. ಜಿಲ್ಲೆಗೆ ಭೇಟಿ ನೀಡಿದ ಗೃಹ ಸಚಿವರು ಸುಹಾಸ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿಲ್ಲ. ಆದರೆ ಮುಸ್ಲಿಂ ಸಂಘಟನೆಗಳ ಜೊತೆ ಸಭೆ ನಡೆಸಿದ್ದಾರೆ. ಸೌಜನ್ಯಕ್ಕಾಗಿಯಾದರೂ ಶಾಸಕರ ಸಭೆ ಕರೆದಿಲ್ಲ, ಅವರನ್ನು ಮಾತನಾಡಿಸಿಯೂ ಇಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಅಸಮಾಧಾನ ಈಗ ಕುದಿಬಿಂದು ತಲುಪಿದ್ದು ಶುಕ್ರವಾರದಂದು ಜಿಲ್ಲೆಯ ಶಾಸಕರು ದೂರರ್ಜಿ ಹಿಡಿದು ರಾಜ್ಯಪಾಲರನ್ನು ಭೇಟಿಯಾಗುವುದಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ.



