ಪಾದಚಾರಿ ಮಹಿಳೆಗೆ ಕಾರು ಢಿಕ್ಕಿ ಹೊಡೆದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುತ್ತಾರ್ ಸಮೀಪದ ಪಂಡಿತ್ ಹೌಸ್ ಎಂಬಲ್ಲಿ ಸಂಭವಿಸಿದೆ.

ಪಂಡಿತ್ ಹೌಸ್ ನಿವಾಸಿ ಪೂರ್ಣಿಮ(59)ಮೃತ ಮಹಿಳೆ. ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭ ವೈದ್ಯಕೀಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೇ.16 ರಂದು ಪೂರ್ಣಿಮಾ ಅವರ ಬಾವ (ಪತಿಯ ಸಹೋದರ)ನ ಪುತ್ರನ ವಿವಾಹ ಸಮಾರಂಭವಿತ್ತು. ಆ ಪ್ರಯುಕ್ತ ಮದುವೆ ಮನೆಗೆ ತೆರಳಿ ವಾಪಸ್ಸಾಗುವಾಗ ಈ ದುರಂತ ಸಂಭವಿಸಿದೆ. ಇದೀಗ ಮದುವೆ ಮನೆಯಲ್ಲಿ ಶೋಕತಪ್ತ ವಾತಾವರಣ ಮನೆ ಮಾಡಿದೆ. ತೊಕ್ಕೊಟ್ಟು- ಮಂಗಳೂರು ವಿ.ವಿ ರಸ್ತೆಯ ಪಂಡಿತ್ ಹೌಸ್ ನಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ತದನಂತರ ಡಾಮರೀಕರಣ ನಡೆಸದೆ ಹೊಂಡಮಯವಾಗಿತ್ತು. ನೂತನವಾಗಿ ಡಾಮರೀಕರಣ ನಡೆಸಿದ ರಸ್ತೆಯ ನಡುವೆ ಇರುವ ಹೊಂಡ ತಕ್ಷಣಕ್ಕೆ ಗೋಜಿಗೆ ಬರುತ್ತಿಲ್ಲ. ಇದರಿಂದ ಕಾರು ಚಾಲಕ ಆಯತಪ್ಪಿ ಮಹಿಳೆಗೆ ಢಿಕ್ಕಿ ಹೊಡೆದಿದ್ದಾನೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.



