ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ-೨೦೨೫ ರ ವಿರುದ್ದ ಇದೇ ಮೇ ೧೩ರಂದು ಸಂಜೆ ೪ಗಂಟೆಗೆ ಉಡುಪಿಯ ಮಿಷನ್ ಕಂಪೌAಡ್ ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಮುಂದೂಡಲಾಗಿದೆ ಎಂದು ವಕ್ಫ್ ಉಳಿಸಿ- ಸಂವಿಧಾನ ರಕ್ಷಿಸಿ ಹೋರಾಟ ಸಮಿತಿಯ ಸದಸ್ಯರಾದ ಮುಸ್ತಾಕ್ ಹೆನ್ನಾಬೈಲು ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಉಗ್ರವಾದಿಗಳ ಭೀಕರ ಹತ್ಯಾಕಾಂಡಕ್ಕೆ ಪ್ರತಿಯಾಗಿ ದೇಶದ ಸೇನೆಯು ಪಾಕಿಸ್ತಾನದಲ್ಲಿರುವ ಉಗ್ರವಾದಿ ನೆಲೆಗಳ ಮೇಲೆ ದಾಳಿ ನಡೆಸಿ, ಭಯೋತ್ಪಾದನೆಯ ವಿರುದ್ಧವಾಗಿ ನಡೆಸಿರುವ ಈ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ಸೇನೆಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಈ ಪ್ರತಿಭಟನಾ ಸಭೆಯನ್ನು ಮುಂದೂಡಲಾಗಿದೆ ಎಂದರು. ಈ ಪ್ರತಿಭಟನಾ ಸಭೆಗೆ ಸಂಬAಧಿಸಿದAತೆ ಜಾತ್ಯತೀತ ಮನೋಭಾವದ ಸಂವಿಧಾನ ಪ್ರೇಮಿ ಸಮಾನ ಮನಸ್ಕ ಸಂಘಟನೆಗೆ ರಾಜಕೀಯ ಪಕ್ಷಗಳು, ಚಿಂತಕರು ಮತ್ತು ಹೋರಾಟಗಾರರು ಒಂದುಗೂಡಿ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಿ ತಯಾರಿ ಮತ್ತು ಪ್ರಚಾರಗಳನ್ನು ನಡೆಸಲಾಗಿತ್ತು. ಪ್ರತಿಭಟನೆಗೆ ಜಾತಿ, ಧರ್ಮ, ಲಿಂಗ, ಭಾಷೆ, ಪಂಗಡಗಳ ಭೇದವಿಲ್ಲದೆ ಜಿಲ್ಲ ಎಲ್ಲ ಭಾಗಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರದ ಈ ಕರಾಳ ಕಾಯ್ದೆಯನ್ನು ವಿರೋಧಿಸುವ ಪ್ರಜ್ಞಾವಂತರು -ಸಂವಿಧಾನ ಪ್ರೇಮಿಗಳು ಆಗಮಿಸುವ ನಿರೀಕ್ಷೆಯಿತ್ತು. ಪ್ರಚಾರದ ಸಂದರ್ಭದಲ್ಲಿ ಸಮಾಜದ ಸರ್ವ ವರ್ಗದವರೂ ಈ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಮಾತ್ರವಲ್ಲ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿತ್ತು. ಆದರೆ, ದೇಶದ ಸೇನೆಯು ಭಯೋತ್ಪಾದನೆಯ ವಿರುದ್ಧವಾಗಿ ನಡೆಸಿರುವ ಈ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ಸೇನೆಗೆ ನೈತಿಕ ಬಲ ನೀಡುವ ನಮ್ಮೆಲ್ಲರ ಜವಾಬ್ದಾರಿ. ಈ ವಿಚಾರದಲ್ಲಿ ಸರ್ಕಾರದ ಪರ ನಮ್ಮ ಬೆಂಬಲವನ್ನು ಸೂಚಿಸುತ್ತಾ ನಾವು ಪೂರ್ವ ನಿಗದಿತ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿರುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ, ವಕ್ಸ್ ಉಳಿಸಿ ಸಂವಿಧಾನ ರಕ್ಷಿಸಿ ಹೋರಾಟ ಸಮಿತಿಯ ಸದಸ್ಯರಾದ ನಾಗೇಶ್ ಉದ್ಯಾವರ, ಮೊಹಮ್ಮದ್ ಇದ್ರೀಸ್ ಹೂಡೆ, ರಮೇಶ್ ಕಾಂಚನ್, ಇಸ್ಮಾಯಿಲ್ ಹುಸೇನ್, ಸುಂದರ್ ಮಾಸ್ತರ್ ಬಿ.ಎಸ್.ಎಫ್. ರಫೀಕ್ ಇತರರು ಉಪಸ್ಥಿತರಿದ್ದರು



