ಉಡುಪಿ: ದೈತ್ಯ ಗಾತ್ರದ ಕಾಡುಕೋಣವೊಂದು ಉಡುಪಿ ಜಿಲ್ಲೆಯ ಶಿರ್ವದ ಪಿಲಾರು ಕಾಡಿನ ಬಳಿ ಕಂಡುಬಂದಿದೆ. ದೈತ್ಯ ಗಾತ್ರದ ಈ ಕಾಡುಕೋಣವನ್ನು ಕಂಡು ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಆಹಾರ ಅರಸಿಕೊಂಡು ನಾಡಿಗೆ ಬಂದಿರುವ ಈ ಕಾಡುಕೋಣವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಮುತುವರ್ಜಿಯಲ್ಲಿ ಮತ್ತೆ ಕಾಡಿಗೆ ಕಳುಹಿಸಿ ಕೊಡಲಾಯಿತು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್, ಧೀರಜ್ ಮತ್ತು ಸಂಗಡಿಗರು ಕಾಡುಕೋಣವನ್ನು ಮರಳಿ ಕಾಡಿಗೆ ಕಳುಹಿಸಿಕೊಡುವಲ್ಲಿ ಶ್ರಮಿಸಿದರು. ಹುಲಿ, ಚಿರತೆ, ಆನೆ, ಕಾಡುಕೋಣ ಮುಂತಾದ ಅನೇಕ ಕಾಡುಪ್ರಾಣಿಗಳು ಇತ್ತೀಚೆಗೆ ನಾಡಿನತ್ತ ಆಗಮಿಸುತ್ತಿರುವುದು ಹೆಚ್ಚುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಿ ಕಾರ್ಯಾಚರಿಸಬೇಕೆಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.



