ಲಾರಿಗಳೆರಡು ಅಪಘಾತ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಬಿಸಿಬಿಸಿ ಜಲ್ಲಿ ಮಿಶ್ರಿತ ಡಾಮರು ಮೈಮೇಲೆ ಹರಿದು ಲಾರಿ ಚಾಲಕನೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ಸಜೀಪದಲ್ಲಿ ಇಂದು ಬೆಳಿಗ್ಗೆ ವೇಳೆ ನಡೆದಿದೆ.

ಸಜೀಪನಡು ಗೋಳಿಪಡ್ಪು ನಿವಾಸಿ ರಫೀಕ್ ( 45) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಉಳಿದಂತೆ ಲಾರಿಯಲ್ಲಿದ್ದ ಕ್ಲೀನರ್ ಯೂಸುಫ್ ಎಂಬಾತನ ಕೈ ಕಾಲುಗಳ ಮೇಲೆ ಡಾಮರು ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಂದು ಲಾರಿಯ ಚಾಲಕ ರಿಜ್ವಾನ್ ಹಾಗೂ ಅಲ್ಪಾಸ್ ಎಂಬಾತನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಕಂಚಿನಡ್ಕಪದವು ಕಡೆಯಿಂದ ಸಜೀಪನಡು ಹೋಗುತ್ತಿದ್ದ ವೇಳೆ ಕಂಚಿನಡ್ಕಪದವು ಎಂಬಲ್ಲಿ ಅಪಘಾತ ಸಂಭವಿಸಿದೆ. ಕೆಂಪು ಕಲ್ಲುಗಳನ್ನು ಸಾಗಿಸುವ ಲಾರಿಗೆ ಹಿಂಬದಿಯಿಂದ ಬರುತ್ತಿದ್ದ ಡಾಮರು ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಎರಡು ಟಿಪ್ಪರ್ ಲಾರಿಗಳು ಆಳೆತ್ತರದಲ್ಲಿದ್ದ ಅಡಿಕೆ ತೋಟಕ್ಕೆ ಪಲ್ಟಿಯಾಗಿ ಬಿದ್ದಿದೆ. ಮತ್ತು ಟಿಪ್ಪರ್ ಲಾರಿಯಲ್ಲಿದ್ದ ಬಿಸಿಬಿಸಿ ಡಾಮರು ಮಿಶ್ರಿತ ಜಲ್ಲಿ ಕಲ್ಲುಗಳು ಕೆಂಪು ಕಲ್ಲು ಸಾಗಿಸುವ ಲಾರಿ ಚಾಲಕನ ಮೈ ಮೇಲೆ ಬಿದ್ದು ಬೆಂದುಹೋಗಿದೆ. ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಲಿಲ್ಲ . ಬಿಸಿಯಾದ ಡಾಂಬರಿನಲ್ಲಿ ಬೆಂದು ಹೋಗಿದ್ದ ಚಾಲಕ ರಫೀಕ್ ಮೃತಪಟ್ಟಿದ್ದಾನೆ. ಜೊತೆಗೆ ಇದ್ದ ಕ್ಲೀನರ್ ಯೂಸುಫ್ ನ ಮೇಲೆಯೂ ಡಾಮರು ಬಿದ್ದಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡಾಮರು ಲಾರಿಯಲ್ಲಿದ್ದ ರಿಜ್ವಾನ್ ಹಾಗೂ ಅಲ್ಪಾಸ್ ಎಂಬವರಿಗೆ ಅಪಘಾತದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಜೀಪನಡುವಿಲ್ಲಿ ರಸ್ತೆಗೆ ಡಾಮರು ಹಾಕುವ ಉದ್ದೇಶದಿಂದ ಡಾಮರು ಸಾಗಿಸುವ ವೇಳೆ ಘಟನೆ ನಡೆದಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯತನದ ಚಾಲನೆ ಹಾಗೂ ಅಜಾಗರೂಕತೆಯೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



