ಒಂದೆಡೆ ಮುಂಗಾರು ನಿರೀಕ್ಷೆಗೂ ಮೊದಲೇ ಈ ಮಾಸಾಂತ್ಯಕ್ಕೆ ಆಗಮಿಸುವ ಸಾಧ್ಯತೆ ಗೋಚರಿಸಿದೆ, ಹಾಗಾಗಿ ರಾಷ್ಟ್ರೀಯ ಹೆದ್ದಾರಿ 660 ಕೂಳೂರಿನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕೆಲಸ ಮತ್ತೆ ಮುಂದಕ್ಕೆ ಹೋಗುವ ಭೀತಿ ಎದುರಾಗಿದೆ.

ಕಾರಣ ಫಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಗೆ ಗರ್ಡರ್ ಕೂರಿಸುವುದಕ್ಕಾಗಿ ಮಣ್ಣು ಹಾಕಲಾಗಿದೆ. ಒಂದು ವೇಳೆ ಮಳೆ ತೀವ್ರಗೊಂಡು ನದಿಯಲ್ಲಿ ನೀರು ಹೆಚ್ಚು ಹರಿದು ಬಂದರೆ ಈ ಮಣ್ಣನ್ನು ತೆರವುಗೊಳಿಸಬೇಕಾಗಿ ಬರಬಹುದು. ಸದ್ಯ ಹಳೆ ಸೇತುವೆಯ ಆರು ಸ್ಪಾನ್ಗಳ ಪೈಕಿ ನಾಲ್ಕರ ಭಾಗಕ್ಕೆ ಮಣ್ಣು ತುಂಬಲಾಗಿದೆ. ಉಳಿದ ಎರಡರ ಭಾಗದಲ್ಲಷ್ಟೇ ನೀರು ಹರಿದು ಹೋಗುತ್ತಿದೆ. ಬೇಸಿಗೆಯಾದ್ದರಿಂದ ಪ್ರಸ್ತುತ ಕೆಲಸ ಚುರುಕಾಗಿ ನಡೆಯುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ನದಿಗುಡ್ಡ ಮಣ್ಣು ಹಾಕುವುದು, ಮಳೆಗಾಲದಲ್ಲಿ ತೆರವು ಮಾಡುವುದು ನಡೆಯುತ್ತಲೇ ಇದೆ. ಈ ಬಾರಿಯಾದರೂ ಗರ್ಡರ್ ಕೂರಿಸುವ ಕೆಲಸ ನಡೆಸಬೇಕು ಎಂದು ಹಿಂದಿನ ಬಾರಿಯ ದಿಶಾ ಸಭೆಯಲ್ಲಿ ಸಂಸದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಮಳೆಗಾಲ ಬಂದಾಗ ಮಣ್ಣು ಬಿಡಿಸಿಕೊಡದೆ ಹೋದರೆ ಕೂಳೂರು, ಅತ್ರಬೈಲು, ತೋಕೂರು ಅಸುಪಾಸಿನಲ್ಲಿ ನೆರೆಯಾಗುವ ಸಂಭವದ ಬಗ್ಗೆ ಆ ಭಾಗದ ನಿವಾಸಿಗಳಿಂದಲೂ ಕಳವಳ ವ್ಯಕ್ತವಾಗುತ್ತಿದೆ. 1952ರಲ್ಲಿ ನಿರ್ಮಾಣಗೊಂಡಿದ್ದ ಕೂಳೂರು ಹಳಿ ಕಮಾನು ಸೇತುವೆ ದುರ್ಬಲವಾಗಿದೆ ಎಂದು 2019ರಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರದಿ ನೀಡಿತ್ತು. ಆ ಬಳಿಕ 56 ಕೋ.ರೂ. ವೆಚ್ಚದಲ್ಲಿ ಹೊಸ 776 ಮೀ.ಉದ್ದದ 6 ಲೇನ್ ಸೇತುವೆಯ ರೂಪುರೇಷೆ ಹಾಕಲಾಗಿತ್ತು. 2021ರಲ್ಲಿ ಕೆಲಸ ಆರಂಭಗೊAಡಿದ್ದು, ಗುತ್ತಿಗೆದಾರರ ಹಣಕಾಸು ಸಮಸ್ಯೆಯಿಂದ ಕೆಲಸ ಸ್ಥಗಿತಗೊಂಡಿತು. 2023ರಲ್ಲಿ ಮತ್ತೆ ಕಾಮಗಾರಿ ಆರಂಭಗೊAಡಿದ್ದು ಕೆಲಸ ನಿಧಾನವಾಗಿ ನಡೆಯುತ್ತಿದೆ.



