‘‘ನಾನಿನ್ನು ಅಂಥದ್ದೇನೂ ಮಾಡೇ ಇಲ್ಲ, ಇಷ್ಟಕ್ಕೆ ಭಯ ಪಟ್ಟರೆ ಹೇಗೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ನ ಗಾಂಧಿನಗರದಲ್ಲಿ ಇಂದು ಮಾತನಾಡಿರುವ ಅವರು, ನಾನು ಪಾಕಿಸ್ತಾನಕ್ಕೆ ಹೋಗುವ ನೀರು ನಿಲ್ಲಿಸಿ ಅದರಿಂದ ಕಸ ತೆಗೆದು ಅಣೆಕಟ್ಟನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಇಷ್ಟಕ್ಕೆ ಪಾಕಿಸ್ತಾನ ಬೆವರುತ್ತಿದೆ ಎಂದು ಹೇಳಿದರು.

1947ರಲ್ಲಿ ಭಾರತ ವಿಭಜನೆಯಾದಾಗ ಸರಪಳಿಗಳನ್ನು ಕತ್ತರಿಸುವ ಬದಲು ತೋಳುಗಳನ್ನು ಕತ್ತರಿಸಲಾಯಿತು, ದೇಶವನ್ನು ವಿಂಗಡಿಸಲಾಯಿತು. ಅದೇ ರಾತ್ರಿ ಕಾಶ್ಮೀರದ ಮಣ್ಣಿನಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಯಿತು ಎಂದರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸಲು ಮತ್ತು ಆರ್ಥಿಕತೆಯನ್ನು ತಕ್ಷಣವೇ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು, ನಾವು ಇನ್ನು ಮುಂದೆ ಯಾವುದೇ ವಿದೇಶಿ ವಸ್ತುಗಳನ್ನು ಬಳಸಬೇಕಿಲ್ಲ ಎಂದರು.
ವಿದೇಶಿ ವಸ್ತುಗಳಿಂದ ಎಷ್ಟೇ ಲಾಭ ಗಳಿಸಿದರೂ, ಯಾವುದೇ ವಿದೇಶಿ ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರತಿ ಹಳ್ಳಿಯ ವ್ಯಾಪಾರಿಗಳಿಂದ ಪ್ರಮಾಣ ಮಾಡಿಸಿಕೊಳ್ಳಬೇಕು. ರಾಜ್ಯದ ಕಲ್ಯಾಣಕ್ಕಾಗಿ ನಾವು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಕೆಲಸ ಮಾಡಿದರೆ, ಉತ್ತಮ ಫಲಿತಾಂಶಗಳು ಬರುತ್ತವೆ ಎಂದು ಪ್ರಧಾನಿ ಹೇಳಿದರು.
ಭಾರತದ ‘ವಸುಧೈವ ಕುಟುಂಬಕಂ’ ಎಂಬ ಮನೋಭಾವವನ್ನು ಒತ್ತಿ ಹೇಳಿದ ಮೋದಿ, ನಮ್ಮ ನೆರೆಹೊರೆಯವರ ಶಾಂತಿ ಮತ್ತು ಸಂತೋಷವನ್ನು ನಾವು ಬಯಸುತ್ತೇವೆ ಎಂದು ಹೇಳಿದರು. ಭಾರತವು ಸಾವಿರಾರು ವರ್ಷಗಳಿಂದ ಶಾಂತಿ ಮತ್ತು ವಿಶ್ವ ಕಲ್ಯಾಣದ ಬಗ್ಗೆ ಮಾತನಾಡುತ್ತಿದೆ.
ಆದರೆ ದೇಶದ ಶಕ್ತಿಗೆ ಸವಾಲು ಎದುರಾದಾಗ, ಈ ವೀರರ ಭೂಮಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನದಿಗಳ ಶುದ್ಧೀಕರಣವನ್ನು ನಿಷೇಧಿಸುವ 1960 ರ ಸಿಂಧೂ ಜಲ ಒಪ್ಪಂದವನ್ನು ಅವರು ಉಲ್ಲೇಖಿಸಿದರು. ಇದರಿಂದಾಗಿ, ಈ ನದಿಗಳನ್ನು 60 ವರ್ಷಗಳಲ್ಲಿ ಸ್ವಚ್ಛಗೊಳಿಸಲಾಗಿಲ್ಲ ಮತ್ತು ದೇಶವಾಸಿಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ನೀರು ಸಿಗಲಿಲ್ಲ.
ಆಪರೇಷನ್ ಸಿಂಧೂರ್ ಕುರಿತು ಮಾತನಾಡಿರುವ ಮೋದಿ, 22 ನಿಮಿಷಗಳಲ್ಲಿ ಉಗ್ರರ 9 ಅಡಗುತಾಣಗಳನ್ನು ನಾಶಪಡಿಸಲಾಯಿತು. ಎಲ್ಲವೂ ಕ್ಯಾಮರಾ ಮುಂದೆಯೇ ನಡೆದಿದೆ. ಹೀಗಾಗಿ ಯಾರೂ ಕೂಡ ಪುರಾವೆ ಎಲ್ಲಿದೆ ಎಂದು ಪ್ರಶ್ನೆ ಮಾಡುವಂತಿಲ್ಲ ಎಂದರು.
1960 ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದದ ವಿವರಗಳನ್ನು ನೀವು ನೋಡಿದರೆ, ನೀವು ಆಘಾತಕ್ಕೊಳಗಾಗುತ್ತೀರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳನ್ನು ಸ್ವಚ್ಛಗೊಳಿಸದಿರಲು ಸಹ ನಿರ್ಧರಿಸಲಾಯಿತು. 60 ವರ್ಷಗಳಿಂದ ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗಿಲ್ಲ ಎಂದು ಮೋದಿ ಮಾಹಿತಿ ನೀಡಿದರು.



