ಕಾನೂನು ಗೌರವಿಸುವುದು ಮತ್ತು ಪಾಲನೆ ಮಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಸ್ವಾತಂತ್ರ್ಯ ಪರಿಪಾಲನೆಯಾಗಬೇಕು ಹೊರತು ಸ್ವಾತಂತ್ರ್ಯವನ್ನು ಮೀರಿದ ವರ್ತನೆ ಸರಿಯಲ್ಲ. ಯಾರೂ ಕಾನೂನು ಮೀರುವ ಕೆಲಸ ಮಾಡಬಾರದು ಎಂದು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹೇಳಿದ್ದಾರೆ. ಇವರು ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಪುತ್ತೂರಿನ ಪುರಭವನದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ರು.
ಡ್ರಗ್ಸ್ ಸೇವನೆ ಮತ್ತು ಸಾಮಾಜಿಕ ಜಾಲತಾಣದ ಕಾರಣದಿಂದಾಗಿ ತೊಂದರೆಯಾಗುತ್ತಿದೆ. ಇದನ್ನು ತಡೆಯುವುದು ಕೇವಲ ಪೊಲೀಸರ ಮಾತ್ರ ಜವಾಬ್ದಾರಿಯಲ್ಲ. ಹೆತ್ತವರಿಗೆ ಮತ್ತು ಸಾರ್ವಜನಿಕರಿಗೂ ಈ ಬಗ್ಗೆ ಜವಾಬ್ದಾರಿಯಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಮುಂದುವರಿದಲ್ಲಿ ಸಮಾಜದಲ್ಲಿ ಯಾವುದೇ ಅಶಾಂತಿ ಹರಡಲು ಸಾಧ್ಯವಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಸಾರ್ವಜನಿಕರದ್ದು ಇದೆ. ಸಾಮಾಜಿಕ ಜಾಲತಾಣ ಸಹಿತ ವಿವಿಧ ಮಾಧ್ಯಮಗಳ ಬಳಕೆಯ ಸಂದರ್ಭದಲ್ಲಿಯು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದಿದ್ದಾರೆ.