ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಜ್ಪೆಯ ಕಿನ್ನಿಪದವು ಎಂಬಲ್ಲಿ ಮೇ 1, 2025 ರಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ತಲವಾರಿನಿಂದ ಕೊಚ್ಚಿ ಕೊಲೆಗೈದಿದ್ರು. ಈ ಘಟನೆಯು ಕರಾವಳಿ ಭಾಗದಲ್ಲಿ ಭಾರೀ ಕೋಮು ಉದ್ವಿಗ್ನತೆಗೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.
ಈ ನಿರ್ಧಾರಕ್ಕೆ ಸುಹಾಸ್ ಶೆಟ್ಟಿಯವರ ತಾಯಿ ಸುಲೋಚನಾ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಸುಹಾಸ್ ಶೆಟ್ಟಿಯವರ ತಾಯಿ ಸುಲೋಚನಾ ಅವರು, ತಮ್ಮ ಮಗನ ಕೊಲೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮಗನನ್ನು ಚಿತ್ರಹಿಂಸೆಗೊಳಪಡಿಸಿ, ಭೀಕರವಾಗಿ ಕೊಲೆ ಮಾಡಲಾಗಿದೆ. ಆತ ಬಜರಂಗದಳ ಕಾರ್ಯಕರ್ತನಾಗಿದ್ದ ಕಾರಣಕ್ಕೆ ಈ ಕೃತ್ಯ ನಡೆದಿದೆ. ಕರ್ನಾಟಕ ಸರ್ಕಾರದ ಮೇಲೆ ನಮಗೆ ಯಾವುದೇ ನಂಬಿಕೆ ಇರಲಿಲ್ಲ. ರಾಜ್ಯ ಸರ್ಕಾರದ ಯಾವುದೇ ನಾಯಕರು ನಮ್ಮ ಮನೆಗೆ ಭೇಟಿ ನೀಡಿಲ್ಲ, ಏನಾಯಿತು ಎಂದು ವಿಚಾರಿಸಿಲ್ಲ. ಅವರು ಕೇವಲ ಮುಸ್ಲಿಂ ಸಮುದಾಯದವರೊಂದಿಗೆ ಸಭೆಗಳನ್ನು ನಡೆಸಿ ಹೋಗುತ್ತಿದ್ದರು. ಇದರಿಂದ ಸರ್ಕಾರ ಅವರ ಪರವಾಗಿದೆ ಎಂದು ಅನಿಸುತ್ತಿತ್ತು,” ಎಂದು ಸುಲೋಚನಾ ಅವರು ಆರೋಪಿಸಿದ್ದಾರೆ.