ಮಾನವೀಯತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ನೀಡಲಾಗುವ ಪದ್ಮ ವಿಭೂಷಣ ಜಾರ್ಜ್ ಫೆರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿ ಅವರು ಮಾತನಾಡಿದ್ರು. ದೇಶದಲ್ಲಿ ಹಗರಣಗಳು ನಡೆಯದಿದ್ದರೆ ದೇಶದ ಆರ್ಥಿಕ ಸ್ಥಿತಿ ಇನ್ನಷ್ಟು ಎತ್ತರಕ್ಕೆ ಹೋಗುತ್ತಿತ್ತು. ಈ ಹಗರಣಗಳಿಂದ ತೊಂದರೆ ಅನುಭವಿಸುವುದು ಸರಕಾರದಿಂದ ಸವಲತ್ತುಗಳನ್ನು ಪಡೆಯಬೇಕಾಗಿದ್ದ ಸಮಾಜದ ಕಟ್ಟಕಡೆಯ ವ್ಯಕ್ತಿ. ಇದರಿಂದ ಶ್ರೀಮಂತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಕೋಟಿ ಕೋಟಿ ಹಗರಣಗಳು ನಡೆಯುತ್ತಿದ್ದರೆ ಮುಂದೆ ಸಮಾಜದಲ್ಲಿ ಶಾಂತಿ ಇರುವುದಿಲ್ಲ. ಯಾರಿಗೆ ಹಣ ಸೇರಬೇಕೊ ಅವರಿಗೆ ಹಣ ಸಿಗದಿದ್ದರೆ ಈ ದೇಶದಲ್ಲಿ ಕ್ರಾಂತಿ ಆಗಬಹುದು. ದೇಶದಲ್ಲಿ ಭಾಷೆ ಹಾಗೂ ಧರ್ಮದ ಆಧಾರದಲ್ಲಿ ಕ್ರಾಂತಿಯಾದರೆ 25ಕ್ಕೂ ಅಧಿಕ ಬೇರೆ ದೇಶಗಳ ಸೃಷ್ಠಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.