ಅಮ್ಮನ ಪ್ರೀತಿ, ಅಪ್ಪನ ಪ್ರೀತಿ, ಗೆಳೆಯರ ಪ್ರೀತಿ ಹೀಗೆ ತರತರಹದ ಪ್ರೀತಿಗಳು ಸಂಘಜೀವಿ ಎನಿಸಿರುವ ಮನುಷ್ಯನನ್ನು ಸುತ್ತಿಕೊಂಡಿದೆ. ಆದರೆ ನಾನಿಲ್ಲಿ ಹೇಳುತ್ತಿರುವ ಪ್ರೀತಿ ಇವುಗಳಿಗಿಂತ ಭಿನ್ನ , ಅದು ಪುರಾತನ ಕಾಲದಿಂದ ಆಧುನಿಕ ಜಗತ್ತಿನ ಕಾಲಘಟ್ಟದವರೆಗೆ ಒಂದೇ ಸಮನಾಗಿ ಪ್ರಚಲಿತದಲ್ಲಿರುವ ಪ್ರೀತಿ. ಈ ಪೀಠಿಕೆಯಲ್ಲೇ ಯಾವ ಪ್ರೀತಿ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು. ಹೌದು, ನಿಮ್ಮ ಊಹೆ ಸರಿಯಾಗಿದೆ, ಆಧುನಿಕ ಜಗತ್ತಿನಲ್ಲಿ ಲವ್, ರಿಲೇಷನ್ಶಿಪ್ ಹೀಗೆ ಬೇರೆ ಬೇರೆ ಹೆಸರು, ರೂಪ ಪಡೆದಿರುವ ಪ್ರೀತಿಯ ಬಗ್ಗೆಯೇ ನಾನು ಹೇಳಹೊರಟಿರುವುದು.
ಜಗತ್ತು ಆಧುನೀಕರಣಗೊಂಡತೆ ಪ್ರೀತಿಯು ಕೂಡ ಆಧುನಿಕತೆಗೆ ಒಗ್ಗಿಕೊಂಡಿದೆ. ಹಿಂದೆಲ್ಲಾ ಪ್ರೀತಿಯೆಂದರೆ ಮನಸ್ಸು ಮನಸ್ಸುಗಳ ನಡುವೆ ಬೆಸೆಯುವ ನಿಷ್ಕಲ್ಮಶ ಬಂಧವಾಗಿತ್ತು, ಆದರೆ ಪ್ರಸ್ತುತ ಅದು ಆಸೆ, ಕನಸುಗಳ ಲೇಪನ ಹಚ್ಚಿಕೊಂಡು ಕಲ್ಮಶಗೊಂಡಿದೆ. “ನನ್ನ ಹುಡುಗಿಯು ಅಂದ ಚಂದ್ರನ ಬಿಳುಪಿನಂತಿರಬೇಕು..!!”, “ನನ್ನ ಹುಡುಗ ತಿಂಗಳಿಗೆ ಕೈ ತುಂಬಾ ಸಂಬಳ ಹಿಡಿಯುವವನಾಗಿರಬೇಕು” ಇಂತಹ ಆಸೆ, ನಿರೀಕ್ಷೆಗಳಿಂದಲೇ ಪ್ರೀತಿಯ ಒಳಾರ್ಥ ನವಯುಗದಲ್ಲಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದೆ. ಪರಿಣಾಮವಾಗಿಯೇ ಮದುವೆಯಲ್ಲಿ ಮುಕ್ತಾಯಗೊಳ್ಳುವ ಪ್ರೀತಿಗಳು ಇಂದಿಗೆ ಕಾಣಸಿಗುವುದು ಬಹಳ ವಿರಳವಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಪ್ರೀತಿಯಷ್ಟೇ ಟ್ರೆಂಡಿನಲ್ಲಿರುವ ಇನ್ನೊಂದು ವಿಷಯ “ಬ್ರೇಕಪ್ “.ಹುಟ್ಟುವ ಪ್ರೀತಿಗಳಿಗಿಂತ ಕ್ಷಣಮಾತ್ರದಲ್ಲಿ ನಶಿಸುವ ಅಂದರೆ ಬ್ರೇಕಪ್ಗಳ ಸಂಖ್ಯೆ ದುಪ್ಪಟ್ಟಾಗಿದೆ. ನವಯುಗದ ಯುವಕ ಯುವತಿಯರು ಪ್ರೀತಿ ಮುರಿದುಕೊಳ್ಳಲು ಕೊಡುವ ಕಾರಣಗಳಂತೂ ಸುಮಾರು ಬಾರಿ ತಮಾಷೆ ಎನಿಸುತ್ತದೆ. “ವಾಟ್ಸಪ್ ಮೆಸೇಜ್ ಗೆ ರಿಪ್ಲೈ ಮಾಡಿಲ್ಲ”, “ಬೇರೆ ಹುಡುಗನ ಜೊತೆ ಮಾತಾನಾಡುತ್ತಿದ್ದಳು” ಹೀಗೆ ಆ ಕಾರಣಗಳು ಎಷ್ಟು ಸಿಲ್ಲಿಯಾಗಿರುತ್ತವೆ ಅಂದರೆ ಮೆಚ್ಯುರಿಟಿ ಎಂಬ ಪದದ ಪರಿವೇ ಇಂದಿನ ಯುವಜನತೆಗೆ ಇಲ್ಲ ಅನ್ನಿಸಿಬಿಡುತ್ತದೆ. ಇಂದಿನ ಬಹುಪಾಲು ಪ್ರೀತಿ ಸೋಲಲು ಕಾರಣ ಪ್ರೇಮಿಗಳು ಪ್ರೀತಿಯನ್ನು ಅರಿತುಕೊಳ್ಳುವ ಬಗೆ ಸುಮಾರು ಬಾರಿ ತಪ್ಪಾಗಿರುತ್ತದೆ. ಪ್ರೀತಿ ಬಯಸುವುದು ಅಂದವನ್ನು, ದುಡ್ಡನ್ನು ಎಂಬುದು ಬಹುಪಾಲು ಜನರ ಊಹೆ. ಆದರೆ ನಿಜವಾಗಿಯೂ ಪ್ರೀತಿ ಬಯಸುವುದು ಇಂದಿನ ಯುವಜನತೆಯಲ್ಲಿ ಕಾಣೆಯಾಗಿರುವ ತಾಳ್ಮೆಯನ್ನು, ಮೆಚ್ಯುರಿಟಿಯನ್ನು ಮತ್ತು ನಂಬಿಕೆಯನ್ನು. ಅಂದ ನೋಡಿ ಆಗುವ ಆಕರ್ಷಣೆಗೂ ಬದುಕಿನ ಅಂಧಕಾರದಲ್ಲೂ ಜೊತೆಗಿರುವ ಪ್ರೀತಿಗೂ ತುಂಬಾ ವ್ಯತ್ಯಾಸವಿದೆ ಎಂಬ ಪ್ರೀತಿಯ ಬೇಸಿಕ್ ಥಿಯರಿಯೇ ಇಂದಿನ ಯುವಕರ ಮೆದುಳಿನ ಗಡಿ ದಾಟಿಲ್ಲ ಅನ್ನಿಸುತ್ತದೆ.
ಇರುವಂತೆ ಒಪ್ಪಿಕೊಂಡು ಅಪ್ಪಿಕೊಳ್ಳುವುದೇ ನನ್ನ ಪ್ರಕಾರ ಪ್ರೀತಿ. ಆದರೆ ಬಹುಪಾಲು ಲವ್ ಸ್ಟೋರಿಗಳು ಇಂದು ವ್ಯಕ್ತಿಯ ವ್ಯಕ್ತಿತ್ವ ಬದಲಾಯಿಸುವ ಮಹತ್ಕಾರ್ಯದಲ್ಲಿ ಬ್ಯುಸಿಯಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಪ್ರೀತಿಸುವ ಆರಂಭದಲ್ಲಿ ಇದ್ದ ವ್ಯಕ್ತಿ ಕಡೆಗೆ ಸಂಪೂರ್ಣವಾಗಿ ಬದಲಾಗಿ, ಬೇರೆ ವ್ಯಕ್ತಿಯೇ ಆಗಿ ಬದಲಾಗುವವರೆಗೆ. ಪ್ರೀತಿಗಾಗಿ ವ್ಯಕ್ತಿತ್ವ ಬದಲಾಯಿಸಿಕೊಳ್ಳುವವರು ಅಥವಾ ಬದಲಾಯಿಸಿಸುವವರು ಅವರೆಂದಿಗೂ ಪ್ರೀತಿಯ ಒಳಾರ್ಥ ತಿಳಿಯಲು ಸಾಧ್ಯವೇ ಇಲ್ಲ. ಪ್ರೀತಿ ಎಂದರೆ ನಾವು ಇಷ್ಟ ಪಡುವ ಜೋನ್ ಆಗಬೇಕೇ ವಿನಃ ಇಷ್ಟವಿಲ್ಲದಿದ್ದರೂ ಒದ್ದಾಡುವ ಜಾಗವಾಗಬಾರದು. ಪ್ರೀತಿ ಆದಕೂಡಲೇ ಎಲ್ಲಿಲ್ಲದ ಸ್ವಾರ್ಥವೂ ಇಂದಿನ ಪ್ರೇಮಿಗಳಿಗೆ ಮೈಗೂಡುತ್ತದೆ. ನನ್ನವನು ಮಾತ್ರ, ನನ್ನವಳು ಮಾತ್ರ ಎಂಬ ಅತಿಯಾದ ಸ್ವಾರ್ಥ ಮುಂದೆ ಬದಲಾಗುವುದು ಎಲ್ಲ ವಿಷಯಕ್ಕೂ ರಿಸ್ಟ್ರಿಕ್ಟ್ ಮಾಡುವ ಕೆಟ್ಟಗುಣವಾಗಿ. ಪ್ರೀತಿಗೂ ಮುನ್ನ ಹಾರುವ ಹಕ್ಕಿಗಳಂತಿದ್ದ ಪ್ರೇಮಿಗಳಿಗೆ ಏಕಾಏಕಿ ಈ ರಿಸ್ಟ್ರಿಕ್ಷನ್ ಭೂತ ಬೆನ್ನೇರಿದಾಗ ಪ್ರೀತಿ ಬಂಧನವಾಗುತ್ತದೆಯೇ ಹೊರತು, ತಮ್ಮಿಚ್ಚೆಯಂತೆ ಬದುಕಲು ಬಿಡುವ ಬೆಂಬಲವಾಗುವುದಿಲ್ಲ. ಪ್ರೀತಿಯಲ್ಲಿ ಬಿರುಕು ಮೂಡಿದ ಕೂಡಲೇ ಕೂತು ಮಾತನಾಡುವ ತಾಳ್ಮೆಗಿಂತ ಕೋಪವೇ ಹೆಚ್ಚಿರುತ್ತದೆ. ಮಾತಾನಾಡಿಸುವ ಮನಸಿದ್ದರೂ ಅವನೇ ಮಾತನಾಡಲಿ, ಅವಳೇ ಮಾತನಾಡಲಿ ಎಂಬ ಈಗೋ ಅದನ್ನು ಕಟ್ಟಿಹಾಕಿರುತ್ತದೆ. ಹೀಗೆ ಪ್ರೀತಿಸಿದ ಮನಸಿಗಿಂತ ಮುನಿಸು ಹೆಚ್ಚಾಗಿ, ಅವನೇ ಹೇಳಲಿ, ಅವಳೇ ಹೇಳಲಿ ಎಂಬ ಈಗೋ ಗಳ ನಡುವೆ ನಿಜ ಪ್ರೀತಿಯೊಂದು ಅರ್ಥಕಳೆದುಕೊಂಡು ಅನಾಥವಾಗುತ್ತಿದೆ.
ಅಂದ ನೋಡಿ ಆದ ಆಕರ್ಷಣೆ ಎಂದಿಗೂ ಪ್ರೀತಿಯಾಗಲು ಸಾಧ್ಯವಿಲ್ಲ. ಇನ್ನೊಂದು ಹೊಸ ಮುಖ ಕಂಡಾಗ ಹಳೆಯ ಅಂದ ಬೋರ್ ಆಗಿ ಬಿಡಬಹುದು, ಆದರೆ ಪ್ರೀತಿ ಎಂಬ ಮನಸುಗಳ ನಡುವಿನ ಬಿಗಿಬಂಧ ಅದು ಎಂದಿಗೂ ಕಳಚುವಂತದ್ದಲ್ಲ, ಬೋರ್ ಆಗುವಂತದ್ದಲ್ಲ. ಪ್ರೀತಿ ಎಂಬುದು ವಿಶಾಲ ಅರ್ಥವನ್ನು ಹೊಂದಿದೆ, ಅದನ್ನು ಅರಿತು ನಡೆದರೆ ನವಯುಗದ ಬಹುಪಾಲು ಪ್ರೀತಿ ಸಕ್ಸಸ್ ಆಗೋದರಲ್ಲಿ ಎರಡು ಮಾತಿಲ್ಲ. ಪ್ರಿ ಮತ್ತು ತಿ ಈ ಎರಡಕ್ಷರ ಸೇರಿ ಪ್ರೀತಿ ಯಾಗಲು ಮಧ್ಯ ಒಂದು ದೀರ್ಘ ಇರ್ಲೇ ಬೇಕು, ಹಾಗಾಗಿ ಸುದೀರ್ಘ ಬಾಳಿಕೆಯ ಪ್ರೀತಿ ನಮ್ಮದಾಗಲಿ. ಜೀವ, ಭಾವಗಳು ಬೆರೆತು ಒಟ್ಟಿಗೆ ಸೇರಿ ಹರಿಯುವ ನದಿಯೇ ಪ್ರೀತಿಯೇ ಹೊರತು, “ಪ್ರೀತಿ ಬರಿ ಆಕರ್ಷಣೆಯಲ್ಲ..!!”
ಬರಹಗಾರರು : ಚೇತನ್, ಕಾಶಿಪಟ್ನ
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…