ಜನ ಮನದ ನಾಡಿ ಮಿಡಿತ

ದೇವಸ್ಥಾನದಲ್ಲಿ ದೇವರು ಕಾಣುವನೇ?

ಜಗತ್ತು ಎಂಬ ವಸ್ತು ಅಥವಾ ವಿಷಯದ ನಿರಂತರ ಮತ್ತು ದನಿವುರಹಿತ ಕಾರ್ಯಪ್ರವೃತ್ತಿಗೆ ಕಾರಣ ಯಾರು? ಎಂಬ ಪ್ರಶ್ನೆ ಮೂಡಿದಾಗ ಬಹುತೇಕ ಎಲ್ಲರು “ದೇವರು ಎಂಬ ಕಣ್ಣಿಗೆ ಕಾಣದ ಅಸಾಮಾನ್ಯ ಶಕ್ತಿಯೊಂದಿದೆ, ಅದರ ದಯೆಯಿಂದಲೇ ಜಗತ್ತು ಕಾರ್ಯನಿರ್ವಹಿಸುತ್ತಿದೆ” ಎಂಬ ಉತ್ತರವನ್ನೇ ನೀಡುತ್ತಾರೆ. ಆದರೆ ಧರ್ಮಗ್ರಂಥ, ಪುರಾಣಗಳಲ್ಲಿ ಈ ದೇವರ ಇರುವಿಕೆಯ ಉಲ್ಲೇಖಗಳಿರುವುದು ಬಿಟ್ಟರೆ ಪರಮಾದ್ಭುತ ಎನಿಸಿರುವ ದೇವರನ್ನು ನೇರವಾಗಿ ಭೇಟಿಯಾದವರು ಯಾರೂ ಇಲ್ಲ.

    ಈ ಧರ್ಮಗ್ರಂಥ, ಪುರಾಣಗಳಲ್ಲಿ ದೇವರ ರೂಪ, ಅವನ ಗುಣನಡತೆ, ಆತನನ್ನು ಪೂಜಿಸುವ ಬಗೆ ಹೇಗೆ? ಮತ್ತು ಜಗತ್ತಿನ ಏಳಿಗೆಯಲ್ಲಿ ಆತನ ಕಾರ್ಯವೇನು? ಹೀಗೆ ಎಲ್ಲದರ ಕುರಿತ ಸಂಕ್ಷಿಪ್ತ ವಿವರಗಳು ದೊರೆಯುತ್ತವೆ. ಇವುಗಳಿಗೆ ಅನುಸಾರವಾಗಿಯೋ ಏನೋ ನಾವು ದೇವರನ್ನು ಗುಡಿಯಲ್ಲೋ, ಮಸೀದಿಯಲ್ಲೋ ಅಥವಾ ಚರ್ಚಿನಲ್ಲೋ ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ಆದರೆ ವಾಸ್ತವಕ್ಕೆ ಬಂದು ಚಿಂತಿಸಿದಾಗ ಮಾನವರ ಕೆಲಸದಿಂದಲೇ ನಿರ್ಮಿತವಾಗುವ, ಮಾನವರಿಂದಲೇ ನಡೆಸಲ್ಪಡುವ, ಮಾನವರೇ ಬಹುಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ದೇವಸ್ಥಾನಗಳಲ್ಲಿ ನಿಜವಾಗಿಯೂ ದೇವರು ಕಾಣುವನೇ..??

ಈ ಒಂದು ಪ್ರಶ್ನೆ ಬಾಲ್ಯದಿಂದಲೂ ನನಗೆ ವಿಪರೀತವಾಗಿ ಕಾಡಿದೆ. ಪ್ರಶ್ನೆಗೆ ಉತ್ತರ ಹುಡುಕುತ್ತಾ ತಿಳಿದವರ ಬಳಿ, ಹೆತ್ತವರ ಬಳಿ ಹೋದಾಗ “ಅಲ್ಪಜ್ಞಾನದಿಂದ ಮಾತನಾಡಬೇಡ, ನಾಸ್ತಿಕನಂತೆ ಆಡಬೇಡ ದೇವರು ಗುಡಿಯೊಳಗೆಯೇ ಇರುತ್ತಾನೆ ಪೂಜಿಸುವ ನಂಬಿಕೆ ಮುಖ್ಯ” ಎಂಬ ಉತ್ತರಗಳು ಕೇಳಿ ಬಂದವು. ಈ ಉತ್ತರಗಳು ನನಗ್ಯಾಕೋ ಸಮೀಪಿಸಲಿಲ್ಲ ಮತ್ತು ದೇವರ ಕುರಿತಾಗಿ ನನ್ನ ಚಿಂತನೆಗಳಿಗೂ ಅವರ ಚಿಂತನೆಗಳಿಗೂ ಬಹಳ ವ್ಯತ್ಯಾಸವಿತ್ತು. ವಯಸ್ಸಿನ ಜೊತೆಗೆ ಯೋಚನಾ ಶಕ್ತಿಯೂ ಬೆಳೆಯುತ್ತಾ ಹೋದ ಹಾಗೆ ದೇವಸ್ಥಾನದ ದೇವರ ಮೇಲಿನ ನನ್ನ ಶೂನ್ಯ ಆಸಕ್ತಿಯೂ ಮುಂದುವರಿಯುತ್ತಾ ಹೋಯಿತು. ಆದರೆ ನನ್ನ ತಾಯಿ ವಿಪರೀತವಾಗಿ ದೇವರನ್ನು ಪೂಜಿಸುವ ಕಾರಣ ಅನಿವಾರ್ಯವಾಗಿ ದೇವಸ್ಥಾನಗಳನ್ನು ಪ್ರವೇಶಿಸಿಸುವ ಸಂಧರ್ಭಗಳು ಒದಗಿ ಬರುತ್ತಿದ್ದವು. ಆಗೆಲ್ಲ ನಾನು ದೇವಸ್ಥಾನಕ್ಕೆ ಹೋಗುತ್ತಿದ್ದುದ್ದು ಕೇವಲ ಆಕೆಯ ಸಂತೋಷಕ್ಕಷ್ಟೇ. ಎಲ್ಲರು ಗುಡಿಯಲ್ಲಿ ಮೌನವಾಗಿ ಕೂತಿರುವ ದೇವರನ್ನು ಕಾಣಲು, ಪೂಜಿಸಲು ಬಂದರೆ ನಾನು ಮಾತ್ರ ಅಲ್ಲಿನ ಜನರ ವರ್ತನೆ, ದೇವರನ್ನು ಅವರು ಪೂಜಿಸುವ ಬಗೆ ಇವುಗಳನ್ನು ಕಾಣುವ ವಿಶೇಷ ಆಸಕ್ತಿಯಿಂದ ಹೋಗುತ್ತಿದ್ದೆ.

      ದೇವಸ್ಥಾನದಲ್ಲಿ ಪ್ರಮುಖವಾಗಿ ನನಗೆ ವಿಶೇಷವೆನಿಸುವುದು ಜನರು ದೇವರಿಗೆ ನಮಿಸುವ ರೀತಿ. ಕೆಲವರು ಕೈ ಜೋಡಿಸಿ ಸರಳವಾಗಿ ನಮಿಸಿದರೆ, ಕೆಲವರು ತಲೆ ಬಾಗಿ, ಇನ್ನೂ ಕೆಲವರು ಸಂಪೂರ್ಣವಾಗಿ ನೆಲಕ್ಕೆ ಅಭಿಮುಖವಾಗಿ ಮಲಗಿ ನಮಿಸುತ್ತಾರೆ. ಬಹುಷಃ ಅವರ ಪ್ರಕಾರ ನಮಿಸುವ ಬಗೆಯನ್ನು ಅನುಸರಿಸಿ ದೇವರು ಒಲಿಯುವ ಪ್ರಮಾಣ ನಿರ್ಧಾರವಾಗುತ್ತದೋ ಏನೋ. ಆದರೆ ಅಮ್ಮನ ಒತ್ತಾಯಕ್ಕೆ ದೇವಸ್ಥಾನಕ್ಕೆ ಹೋಗುವ ನನಗೆ ಇಷ್ಟವಿಲ್ಲದೇ ಹೋದರು ಆಕೆಯ ಸಂತೋಷಕ್ಕೋ ಅಥವಾ ಎಲ್ಲರೂ ಕೈ ಮುಗಿಯುವಾಗ ನಾನೊಬ್ಬ ವಿಭಿನ್ನವಾಗಿ ಕಾಣಬಾರದು ಎಂಬ ಮುಜುಗರದಿಂದಲೋ ಆ ಮೌನರೂಪಿ ಕಲ್ಲಿನಮೂರ್ತಿಗೆ ನಮಿಸುವ ಅನಿವಾರ್ಯ ಪರಿಸ್ಥಿತಿಗಳು ಹಲವು ಬಾರಿ ಬಂದಿವೆ. ದೇವರ ಪೂಜೆ, ದೇವರ ಪ್ರಸಾದ, ದೇವಸ್ಥಾನದ ವಿಶೇಷ ಆಚರಣೆಗಳು, ಅಲ್ಲಿನ ಜನರ ಭಕ್ತಿ ಇವೆಲ್ಲ ನನಗ್ಯಾಕೋ ಹೆಚ್ಚಿನ ಬಾರಿ ಆಡಂಬರ ಎನಿಸುತ್ತದೆ. ಕಾರಣ ಅವರಲ್ಲಿರುವ ದೈವಿಕತೆ ಮತ್ತು ನಂಬಿಕೆ ನನ್ನಲ್ಲಿಲ್ಲದಿರುವುದು ಮತ್ತು ಅವರು ದೇವರನ್ನು ಕಾಣುವ ಬಗೆ ಮತ್ತು ನಾನು ಕಾಣುವ ಬಗೆ ಇವುಗಳ ನಡುವಿನ ವ್ಯತ್ಯಾಸವಿರಬಹುದು. ಹಾಗಂತ ನಾನೂ ನಾಸ್ತಿಕನೇ?? ಖಂಡಿತವಾಗಿಯೂ ಇಲ್ಲ, ಭಕ್ತಿ ಇಲ್ಲದವನಷ್ಟೇ ನಾಸ್ತಿಕನಾಗುತ್ತಾನೆ, ಮಾಡುವ ಕೆಲಸ, ಜೀವ ಮತ್ತು ಜೀವನ ಕೊಟ್ಟವರ ಮೇಲೆ ಅಪಾರ ಭಕ್ತಿ ಇರುವ ನಾನು ನಾಸ್ತಿಕನಾಗಲಾರೆ. ನೆಮ್ಮದಿ ಕೊಡುವ ಜಾಗವೇ ನನಗೆ ದೇವಸ್ಥಾನ, ನಾ ಮಾಡುವ ಧನಾತ್ಮಕ ಚಿಂತನೆಯೇ ಎನಗೆ ದೇವರು.

     ದೇವಸ್ಥಾನದಲ್ಲಿ ನನಗೆ ದೇವರು ಕಾಣದೆ ಹೋದರು ಸದಾ ಅವರಿವರನ್ನು ಮೀರಿ ಬೆಳೆಯಬೇಕೆಂಬ ಜಿದ್ದಿನಿಂದ ಓಡುತ್ತಿರುವ ಮನುಷ್ಯರು ದಣಿದು ದೇವಸ್ಥಾನದ ಕಟ್ಟೆಯ ಮೇಲೆ ವಿಶ್ರಮಿಸುವುದು ಕಂಡಿತು. ಸದಾ ಸ್ವಾರ್ಥ ತುಂಬಿದ ಮೃಗವಾಗಿರುವ ಮನುಜ ತನ್ನವರಿಗಾಗಿ ದೇವರ ಬಳಿ ಬೇಡಿಕೊಳ್ಳುವಾಗ ಕಲ್ಮಶವಿಲ್ಲದ ಮಗುವಾಗುವುದು ಕಂಡಿತು. ಅನ್ನದ ಬೆಲೆ ಅರಿಯದೇ ಆಹಾರ ವ್ಯರ್ಥ ಮಾಡುವವನು ದೇವರ ಪ್ರಸಾದವೆಂದು ಒಂದಗುಳು ಬಿಡದೆ ಉಂಡದ್ದು ಕಂಡಿತು. ಮೇಲು ಕೀಳಿನ ಸಂಘರ್ಷಕ್ಕೊ0ದು ವಿರಾಮ ಕೊಟ್ಟು ಸಮಾನತೆಯ ಜ್ಯೋತಿ ಉರಿಯುವುದು ಕಂಡಿತು. ಕಡೆಯದಾಗಿ ದೇವರ ಕಾಣುವ ನೆಪ ಹಿಡಿದು ಗುಡಿಯೊಳಗೆ ಬಂದ ಮನುಷ್ಯ, ಮನುಷ್ಯನಾಗಿದ್ದು ಕಂಡಿತು..!!

                                                                                                                                                                                                                                                          ಬರಹಗಾರರು: ಚೇತನ್ ಕಾಶಿಪಟ್ನ

Leave a Reply

Your email address will not be published. Required fields are marked *

ದುಬೈ: ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳರು 

ಮಂಗಳೂರು: ವಿಶೇಷ ಕಾರ್ಯಪಡೆ ಘಟಕ ಲೋಕಾರ್ಪಣೆಗೊಳಿಸಿದ ಡಾ.ಜಿ.ಪರಮೇಶ್ವರ್

ಉಡುಪಿ: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೃತಕ ನೆರೆ ಸೃಷ್ಟಿ…!

ಮಂಗಳೂರು: ವಿಮಾನ ಪತನ ;ಮಂಗಳೂರು ಮೂಲದ ಸಹ ಪೈಲಟ್ ಕ್ಯಾ. ಕ್ಲೈವ್ ಕುಂದರ್ ಸಾವು

ವಿಮಾನ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ!!!

ಕುತ್ತಾರು: 12 ನೇ ಮಹಡಿಯಿಂದ ಬಿದ್ದು ಬಾಲಕಿ ಮೃತ್ಯು

ಪತ್ನಿಯನ್ನು ಕರೆತರಲು ಲಂಡನ್‌ಗೆ ಹೊರಟ್ಟಿದ್ದ ಮಾಜಿ ಸಿಎಂ ವಿಜಯ್ ರೂಪಾನಿ ದುರಂತ ಅಂತ್ಯ

ವಿಮಾನ ದುರಂತದಿ0ದ ಮಹಿಳೆ ಗ್ರೇಟ್ ಎಸ್ಕೇಪ್… ಕಾರಣ??

ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಘೋಷಣೆ

error: Content is protected !!