ಬದುಕು ಅನೀರೀಕ್ಷಿತ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿದವರೆಲ್ಲ ಸುಟ್ಟು ಕರಕಲಾದ ಶವಗಳಾಗಿ ಹಿಂತಿರುಗಿದ್ದಾರೆ. ಯಾರು ಊಹಿಸದ, ಕಂಡು ಕೇಳರಿಯದ ಭೀಕರ ಲೋಹ ಹಕ್ಕಿಯ ದುರಂತವೊಂದು ನಿನ್ನೆ ಗುಜರಾತ್ ನ ಅಹಮ್ಮದ್ ಬಾದ್ ನ ಮೇಘಾನಿ ನಗರದಲ್ಲಿ ಸಂಭವಿಸಿದೆ. ಗುಜರಾತ್ನಿಂದ ಲಂಡನ್ಗೆ ತೆರಳಬೇಕಿದ್ದ ಏರ್ ಇಂಡಿಯಾದ ಎ1171 ಸಂಖ್ಯೆಯ ವಿಮಾನವು ಟೇಕ್ ಆಫ್ ಆಗಿ ಸಾವಿರ ಅಡಿ ಮೇಲಕ್ಕೇರುವ ಮುನ್ನವೇ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು 265 ಕ್ಕೂ ಹೆಚ್ಚು ಜನರನ್ನು ಚಿರನಿದ್ರೆಯಲ್ಲಿ ಮಲಗಿಸಿಬಿಟ್ಟಿದೆ. ಭಾರತದ ವಾಯುಸಾರಿಗೆ ಇತಿಹಾಸದಲ್ಲಿಯೇ ಸಂಭವಿಸಿದ ಅತ್ಯಂತ ದೊಡ್ಡ ವಿಮಾನ ಪತನದ ಕೊನೆಕ್ಷಣಗಳು ಹೇಗಿತ್ತು? ಅಸಲಿಗೆ ಈ ದುರ್ಘಟನೆಗೆ ಕಾರಣವಾದ್ರು ಏನು? ಅಪಾಯದ ಮುನ್ಸೂಚನೆಯಿದ್ದ ಪೈಲೆಟ್ ಗಳು ಕಡೆಕ್ಷಣದಲ್ಲಿ ಪಟ್ಟ ಸಂಕಟ ಹೇಗಿತ್ತು ಗೊತ್ತಾ?
ವೀಕ್ಷಕರೇ ನಿಮಗೆಲ್ಲ 2010 ಮೇ 22 ರಂದು ಮಂಗಳೂರಿನಲ್ಲಿ ನಡೆದ ವಿಮಾನ ದುರಂತದ ಬಗ್ಗೆ ನೆನಪಿರಬಹುದು. 150ಕ್ಕೂ ಹೆಚ್ಚು ಜನರ ಪ್ರಾಣವನ್ನು ಕಸಿದುಕೊಂಡಿದ್ದ ಈ ದುರ್ಘಟನೆಯಲ್ಲಿ ಪವಾಡವೆಂಬಂತೆ ಎಂಟು ಜನರು ಅದೇಗೋ ಬದುಕುಳಿದಿದ್ದರು. ಅಂದು ಇಡೀ ದೇಶ ಇಂತಹ ದುರ್ಘಟನೆ ಮರುಕಳಿಸದಿರಲಿ ಎಂದು ಕೈ ಮುಗಿದು ದೇವರಲ್ಲಿ ಪ್ರಾರ್ಥನೆಯನ್ನು ಕೂಡ ಸಲ್ಲಿಸಿತ್ತು. ಬಹುಷ ಆ ಪ್ರಾರ್ಥನೆ ದೇವರಿಗೆ ತಲುಪಲಿಲ್ಲವೊ ಏನೋ ಆ ದುರ್ಘಟನೆ ನಡೆದು ಹದಿನೈದು ವರ್ಷ ಕಳೆಯುತ್ತಿದ್ದಂತೆ ಇದೀಗ ಅದಕ್ಕಿಂತಲೂ ಭೀಕರವಾದ ದುರ್ಘಟನೆಯೊಂದು ನಿನ್ನೆ ಗುಜರಾತ್ ನಲ್ಲಿ ಸಂಭವಿಸಿಯೇ ಬಿಟ್ಟಿದೆ. ನಿನ್ನೆ ಮದ್ಯಾಹ್ನ ಒಂದು ಗಂಟೆಯ ಸುಮಾರಿಗೆ ಗುಜರಾತ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲವು ಶಾಂತವಾಗೇ ಇತ್ತು. ಗುಜರಾತ್ ನಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ 787-8 ಬೋಯಿಂಗ್ ವಿಮಾನವು ಟೇಕ್ ಆಫ್ ಆಗಲು ಸಕಲ ತಯಾರಿಯೊಂದಿಗೆ ಅಣಿಯಾಗಿತ್ತು. ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಸೇರಿ 164 ಭಾರತೀಯರು ಮತ್ತು ಐವತ್ತಕ್ಕೂ ಹೆಚ್ಚು ವಿದೇಶಿಯರನ್ನು ಹೊಂದಿದ್ದ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಇಷ್ಟು ಭೀಕರವಾಗಿ ಪತನವಾಗಬಹುದು ಅಂತಹ ಬಹುಷ ಯಾರೊಬ್ಬರೂ ಕೂಡ ಊಹಿಸಿರಲು ಸಾಧ್ಯವೇ ಇಲ್ಲ.
ವಿಮಾನದ ಪೈಲೆಟ್ ಆಗಿದ್ದ ಮಂಗಳೂರಿನ ಕ್ಲೈವ್ ಕುಂದರ್ ಸೇರಿ ಇತರರೂ ಒಂದು ಮೂವತ್ತರ ಸುಮಾರಿಗೆ ಫ್ಲೈಟ್ ಟೇಕ್ ಆಫ್ ಮಾಡ್ತಾರೆ. ಅದೇನಾಯ್ತೋ ಗೊತ್ತಿಲ್ಲ ಟೇಕ್ ಆಫ್ ಆಗುತ್ತಿದ್ದಂತೆ ವಿಮಾನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಆಗಲೇ ವಿಮಾನದ ಪೈಲೆಟ್ ಗಳಿಗೆ ಅಪಾಯದ ಮುನ್ಸೂಚನೆ ಸಿಕ್ಕಿತ್ತು, ತಕ್ಷಣವೇ ಮೇಡೇ ಸಂದೇಶವನ್ನು ಕೂಡ ರವಾನೆ ಮಾಡಿದ್ರು. ಅಷ್ಟಕ್ಕೂ ಮೇಡೇ ಅಂದ್ರೆ ವಾಯುಸಾರಿಗೆ ಭಾಷೆಯಲ್ಲಿ ತುರ್ತು ಪರಿಸ್ಥಿತಿ ಅಥವಾ ಅಪಾಯದ ಸಂಕೇತವಂತೆ. ಈ ಸಂದೇಶ ರವಾನೆ ಮಾಡಿದ ಬಳಿಕವೂ ಪೈಲೆಟ್ ಗಳು ಪರಿಸ್ಥಿತಿಯನ್ನು ಸಂಬಾಲಿಸೋದಕ್ಕೆ ನಿರಂತರವಾಗಿ ಪ್ರಯತ್ನ ಪಟ್ಟಿದ್ರು. ಅಷ್ಟರಲ್ಲಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು ,ಪೈಲೆಟ್ ಗಳಿಗೆ ತಮ್ಮ ಸಾವಿನ ಜೊತೆಗೆ ವಿಮಾನದಲ್ಲಿದ್ದ 242 ಪ್ರಯಾಣಿಕರ ಸಾವಿನ ಬಗೆಗೂ ಖಚಿತತೆ ಸಿಕ್ಕಿತ್ತು. ಆ ಪೈಲೆಟ್ ಗಳು ಅದೆಷ್ಟು ಸಂಕಟ ಪಟ್ಟಿರಬೇಡ? ತಮ್ಮ ಜೊತೆಗೆ 242 ಜನರ ಪ್ರಾಣವನ್ನು ಕಸಿದುಕೊಂಡೆವು ಎಂಬ ಪಾಪಪ್ರಜ್ಞೆ ಅದೆಷ್ಟರ ಮಟ್ಟಿಗೆ ಅವರನ್ನು ಕಾಡಿರಬೇಡ? ಕಡೆಕ್ಷಣದಲ್ಲೂ ಕೂಡ ಪೈಲೆಟ್ ಒಬ್ಬರು ಪರಿಸ್ಥಿತಿ ಕೈಮೀರಿ ಹೋಗಿರುವ ಬಗ್ಗೆ ಎಟಿಸಿಗೆ ಸಂದೇಶವನ್ನು ಕೂಡ ರವಾನಿಸಿದ್ರಂತೆ. ಈ ಸಂದೇಶ ರವಾನೆಯಾದ ಕೆಲವೇ ಕ್ಷಣದಲ್ಲಿ ವಿಮಾನವು ಮೇಘಾನಿ ನಗರದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿಯೇ ಬಿಟ್ಟಿತ್ತು. ವಿಮಾನದಲ್ಲಿದ್ದ ಪೈಲೆಟ್ ಮಂಗಳೂರಿನ ಕ್ಲೈವ್ ಕುಂದರ್, ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಸೇರಿ 241 ಜನ ಪ್ರಯಾಣಿಕರ ಜೊತೆಗೆ ಹಾಸ್ಟೆಲ್ ನಲ್ಲಿದ್ದ 24 ವೈದ್ಯಕೀಯ ವಿದಾರ್ಥಿಗಳು ಮುಖದ ಗುರುತು ಕೂಡ ಸಿಗದ ಹಾಗೆ ಸಾವಿನ ಮನೆಯನ್ನ ಹೊಕ್ಕಿದ್ರು. ಎಲ್ಲರೂ ಕನಸುಗಳನ್ನ ಹೊತ್ತಿದ್ದವರೇ, ಭೀಕರ ದುರ್ಘಟನೆಯಲ್ಲಿ ಅವರ ದೇಹದ ಜೊತೆಗೆ ಹೊತ್ತಿದ್ದ ಸಾವಿರ ಕನಸುಗಳು ಕೂಡ ಉರಿದು ಭಸ್ಮವಾಗಿತ್ತು .
ಇಷ್ಟು ದೊಡ್ಡ ಅವಘಡದಲ್ಲೂ ಕೂಡ ಒಬ್ಬ ಪ್ರಯಾಣಿಕ ಮಾತ್ರ ಪವಾಡಸದೃಶ್ಯವಾಗಿ ಬದುಕುಳಿದಿದ್ದಾನೆ ,ಅಲ್ಲದೇ ಇನ್ನೊಬ್ಬಳು ಕೇವಲ ಹತ್ತು ನಿಮಿಷ ಅಂತರದಲ್ಲಿ ಆ ಫ್ಲೈಟ್ ಮಿಸ್ ಮಾಡಿಕೊಂಡಿದ್ದಳು. ಆಯುಷ್ಯ ಅನ್ನೋದು ಗಟ್ಟಿ ಇದ್ದರೆ ಸಾವಿಗೆ ಒಂದು ಹಾಯ್ ಹೇಳಿ ಬದುಕಿ ಬರಬಹುದು ಎಂಬುದಕ್ಕೆ ಈ ವ್ಯಕ್ತಿಗಳೇ ನಿದರ್ಶನ. ಎಲ್ಲವು ವಿಧಿಲಿಖಿತ ,ಪ್ರತಿಯೊಬ್ಬರ ಅಂತ್ಯ ಎಲ್ಲಿ, ಹೇಗೆ ಎಂಬುದನ್ನು ಲೆಕ್ಕಾಚಾರ ಹಾಕಲು ಸಾಧ್ಯವೇ ಇಲ್ಲ ಎಂಬುದನ್ನು ಈ ಘಟನೆ ಎಲ್ಲರಿಗು ಬಲವಾಗಿ ಮನದಟ್ಟಾಗಿಸಿದೆ. ಇನ್ನು ಈ ದುರಂತದ ಬಗ್ಗೆ ಶರ್ಮಿಷ್ಠಾ ಎನ್ನುವ ಖ್ಯಾತ ಜ್ಯೋತಿಷಿಯೊಬ್ಬರು ವಾರದ ಹಿಂದೆಯೇ ಸುಳಿವು ಕೊಟ್ಟಿದ್ದರು. 2025 ರಲ್ಲಿ ವಿಮಾನ ದುರಂತ ಸಂಭವಿಸಿಯೇ ಸಂಭವಿಸುತ್ತದೆ ಎಂದು ಅವರು ಮಾಡಿದ ಟ್ವೀಟ್ ಒಂದು ಸದ್ಯ ಸಾಮಾಜಿಕ ಜಾಲತಾಗಳಲ್ಲಿ ಸಂಚಲನ ಎಬ್ಬಿಸಿದೆ. ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದುರಂತ ನಡೆದ ಸ್ಥಳಕ್ಕೆ ಭೇಟಿನೀಡಿದ್ದಾರೆ. ಇನ್ನು ಟಾಟಾ ಗ್ರೂಪ್ಸ್ ಕೂಡ ಮೃತರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಧನವನ್ನು ಕೂಡ ಘೋಷಿಸಿದೆ.
ಅದೇನೇ ಇರ್ಲಿ ಹಾರುವ ಕನಸೊಂದರ ರೆಕ್ಕೆ ಮುರಿದ್ದಂತಾಗಿದೆ, ಒಮ್ಮಿದೊಮ್ಮೆಲೇ ಈ ರೀತಿ ಬಂದೆರಗುವ ಅನಿರೀಕ್ಷಿತ ಸಾವಿನ ಬಗ್ಗೆ ನಮ್ಮಲ್ಲಿನ ಭಯವನ್ನು ಈ ಘಟನೆ ದುಪಟ್ಟುಗೊಳಿಸಿದೆ. ಸಾವು ಈ ರೀತಿ ಬರುವುದಾದರೆ ನಾವು ಜೀವನ ಪೂರ್ತಿ ನಡೆಸುವ ಹೋರಾಟಕ್ಕೆ ಫಲವೇನು? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತಾಗಿದೆ. ದುರಂತ ಅಂತ್ಯ ಕಂಡ ಆ ಜೀವಗಳ ಆತ್ಮಕ್ಕೆ ಸದ್ಗತಿ ದೊರೆಯಲಿ, ಕನಸಿನಲ್ಲೂ ಕಾಡುವ ಸಾವಿನಿಂದ ಅವರ ಕುಟುಂಬವರ್ಗ ಚೇತರಿಸಿಕೊಳ್ಳುವಂತಾಗಲಿ. ಇಂತಹದೊಂದು ದುರಂತ ಮತ್ತೆ ಮರುಕಳಿಸದಿರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ……..
ಚೇತನ್ ಕಾಶಿಪಟ್ನ