ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಲು ಎಂಬಲ್ಲಿ ವಿದ್ಯುತ್ ಶಾಕ್ ಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕೂರೇಲು ನಿವಾಸಿ ಪುರಂದರ ಎಂಬವರ ಪತ್ನಿ ಜಲಜಾಕ್ಷಿ (38) ಎಂದು ಗುರುತಿಸಲಾಗಿದೆ. ಇವರು ಮದ್ಯಾಹ್ನ 2.30 ರ ವೇಳೆಗೆ ತಮ್ಮ ತೋಟದಲ್ಲಿರುವ ಕೃಷಿ ಪಂಪು ಚಾಲನೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿತ್ತಾದರೂ ಅಷ್ಟರಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಸವಣೂರು ಶಾಖಾ ಕಛೇರಿಯ ಶಾಖಾಧಿಕಾರಿ ರಾಜೇಶ್, ಚಾರ್ವಾಕ ಸಿ.ಎ. ಬ್ಯಾಂಕ್ ಅಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಗ್ರಾಮ ಪಂಚಾಯಿತಿ ಪಿಡಿಒ ರಘು ಬಿ.ಎನ್., ಸದಸ್ಯರಾದ ಲೋಕಯ್ಯ ಪರವ, ದೇವಿಪ್ರಸಾದ್, ಅಂಬಾಕ್ಷಿ, ತಾರಾನಾಥ ಮತ್ತಿತರರು ಭೇಟಿ ನೀಡಿದರು. ಮೃತರಿಗೆ ಆರು ಹಾಗೂ ಮೂರನೆ ತರಗತಿಯಲ್ಲಿ ಓದುತ್ತಿರುವ ಇಬ್ಬರು ಗಂಡು ಮಕ್ಕಳಿದ್ದಾರೆ.