ಓದಿನಲ್ಲಿ ವಿಪರೀತ ಒತ್ತಡಕ್ಕೊಳಗಾಗಿ, ತಲೆನೋವಿನಿಂದ ಬಳಲುತ್ತಿದ್ದ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಉಳ್ಳಾಲ ತಲಪಾಡಿ ದೇವಿಪುರದ ಶಾರದಾ ವಿದ್ಯಾಲಯದ ಆವರಣದ ಸಿಬ್ಬಂದಿ ವಸತಿ ಗೃಹದಲ್ಲಿ ನಡೆದಿದೆ.
![]()
ಮಂಗಳೂರು ಬೆಂದೂರ್ ವೆಲ್ ನ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಸಾಲಿನ ಬಿಎ ವ್ಯಾಸಂಗ ನಡೆಸುತ್ತಿದ್ದ ವಿದ್ಯಾರ್ಥಿನಿ ಶ್ರೇಯಾ ಆತ್ಮಹತ್ಯೆಗೈದ ವಿದ್ಯಾರ್ಥಿನಿಯಾಗಿದ್ದಾರೆ. ತಲಪಾಡಿ ನಾರ್ಲ ನಿವಾಸಿಯಾದ ಶ್ರೇಯಾ, ತಾಯಿ ಪುಷ್ಪಲತಾ ಅವರು ದೇವಿಪುರದ ಶಾರದಾ ವಿದ್ಯಾಲಯದಲ್ಲಿ ಅಟೆಂಡರ್ ಕೆಲಸದಲ್ಲಿದ್ದು ಸಂಸ್ಥೆಯ ವಸತಿ ಗೃಹದಲ್ಲೇ ಗಂಡ ಮತ್ತು ಮಕ್ಕಳ ಜೊತೆಯಲ್ಲಿ ನೆಲೆಸಿದ್ರು. ಶ್ರೇಯಾ ಎಂದಿನಂತೆ ಬೆಳಗ್ಗೆಯೂ ಕಾಲೇಜಿಗೆ ತೆರಳಿ, ಸಂಜೆ ಶ್ರೇಯಾ ತಂಗಿ ಶಾಲೆ ಮುಗಿಸಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ನೋಡಿದಾಗ ಮನೆಯ ಬೆಡ್ ರೂಂನ ಕಿಟಕಿಗೆ ಶ್ರೇಯ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಶ್ರೇಯಾ ಬರೆದಿರುವ ಡೆತ್ ನೋಟ್ ಪೊಲೀಸರಿಗೆ ದೊರೆತಿದ್ದು, ಓದಿನಲ್ಲಿ ಕಳೆದ ಎರಡು ತಿಂಗಳಿನಿಂದ ವಿಪರೀತ ಒತ್ತಡ ಎದುರಿಸುತ್ತಿದ್ದು, ಸಹಿಸದ ತಲೆ ನೋವಿನಿಂದ ಬಳುತ್ತಿದ್ದೇನೆಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.



