ಕುಡಿತದ ನಶೆಯಲ್ಲಿ ಮನೆಯ ಷೋಕೇಸ್ ಗಾಜು ಕೈಯಲ್ಲೇ ಒಡೆದ ಪರಿಣಾಮ ವಿವಾಹಿತನೋರ್ವ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿರುವ ಘಟನೆ ಮಾಡೂರು ಸೈಟ್ನಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಮಾಡೂರ್ ಸೈಟ್ ನಿವಾಸಿ ಸತೀಶ್ ನಾಯಕ್ ಎಂಬವರ ಪುತ್ರ 38 ವರ್ಷದ ನಿತೇಶ್ ನಾಯಕ್ ಸಾವನ್ನಪ್ಪಿದ್ದಾನೆ.

ಕೋಟೆಕಾರು ಬೀರಿ ಜಂಕ್ಷನ್ ಸಮೀಪವೇ ತಂದೆ ಹಾಗೂ ಸಹೋದರನ ಜೊತೆಗೆ ಗಲಾಟೆ ನಡೆಸುತ್ತಾ ಬಂದಿದ್ದ ನಿತೇಶ್, ಮನೆಯಲ್ಲಿಯೂ ಸಹ ನಿತ್ಯದಂತೆ ಗಲಾಟೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಈ ವೇಳೆ ಆಕ್ರೋಶದಿಂದ ಮನೆಯೊಳಗಿರುವ ಷೋಕೇಸ್ ಗಾಜನ್ನು ಒಡೆದಿದ್ದರಿಂದಾಗಿ, ಷೋಕೇಸ್ ಗಾಜು ಒಡೆದು ಕೈಯಲ್ಲಿರುವ ಪ್ರಮುಖ ನರಕ್ಕೆ ತಗಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ.

ನಿತೇಶ್, ಸಹೋದರ ಇಬ್ಬರೂ ತಿಂಡಿ ಲೈನ್ ಸೇಲ್ ನಡೆಸುತ್ತಿದ್ರು. ನಿನ್ನೆಯೂ ಕರ್ತವ್ಯ ಮುಗಿಸಿ ಮನೆಗೆ ವಾಪಾಸ್ಸಾದ ಬಳಿಕ ಗಲಾಟೆ ಮಾಡಿಕೊಂಡಿದ್ದಾರೆ. ವಿವಾಹಿತರಾಗಿದ್ದ ಅವರು ಪತ್ನಿ ಜೊತೆಗೆ ವಿಚ್ಛೇದನ ಪಡೆದಿದ್ರು. ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



