ದುಡಿಯುವ ವರ್ಗದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಕ್ಷರ ದಾಸೋಹ ನೌಕರರ ಸಂಘದಿಂದ ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ. ಅಕ್ಷರ ದಾಸೋಹ, ಆಶಾ ಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ಕನಿಷ್ಠ ವೇತನ ಜಾರಿಗೊಳಿಸಬೇಕು. ಕಾರ್ಮಿಕ ಕಾನೂನುಗಳಲ್ಲಿ ಕೆಲಸದ ಅವಧಿ ಹೆಚ್ಚಳ ಸೇರಿದಂತೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಮಾಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಮತ್ತು ಜೀವನ ಯೋಗ್ಯ ಕನಿಷ್ಠ ವೇತನ ರೂ. 36ಸಾವಿರ ನಿಗದಿಗಾಗಿ ಗುತ್ತಿಗೆ ಮುಂತಾದ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ, ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಪಿಂಚಣಿ ಸೇರಿದಂತೆ ಕಲ್ಯಾಣ ಸೌಲಭ್ಯಗಳ ಜಾರಿಗಾಗಿ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಮದ್ಯಾಹ್ನದ ಊಟದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯಿತು. ಕಾರ್ಮಿಕ ಮುಖಂಡೆ ಈಶ್ವರಿ ಅವರು ಮಾತನಾಡಿ, ರಾಜ್ಯ ಸರಕಾರ ಇರಬಹುದು ಕೇಂದ್ರ ಸರಕಾರ ಇರಬಹುದು ದುಡಿಯುವ ವರ್ಗಗಳಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ. ಇವತ್ತು ಕಾನೂನು ಕಾಯ್ದೆಗಳು ಜಾರಿ ಆದರೆ ನಮಗೆ ಸಿಗುವ ವೇತನ, ಬೋನಸ್, ಸಮಾನ ವೇತನದ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ. ಮುಂದೆ ಸರಕಾರ ಎನು ಮಾಡಿದರೂ ಒಪ್ಪಿಕೊಳ್ಳಬೇಕು. ಆ ಮೂಲಕ ಸರಕಾರ ನಿಮ್ಮ ಶೋಷಣೆ ಮಾಡುವವರು ನಾವು ಎಂದು ಬಹಿರಂಗವಾಗಿ ಹೇಳುವಂತಾಗಿದೆ. ಸರಕಾರದ ಆ ಕುರ್ಚಿಯನ್ನು ಎಳೆದು ರಸ್ತೆಗೆ ಬಿಸಾಡುವ ತಾಕತ್ತು ನಮಗಿದೆ. ಮುಂದಿನ ದಿನ ನಮ್ಮ ಹೋರಾಟ ತೀವ್ರ ಗೊಳಿಸಬೇಕು. ಕೆಂಬಾವುಟ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಕೆಂಬಾವುಟ ಹಿಡಿದು ಮಾಡಿದ ಹೋರಾಟಗಳು ಎಲ್ಲೂ ಸೋಲಿಲ್ಲ ಯಶಸ್ವಿಯಾಗಿದೆ ಎಂದು ಹೇಳೀದ್ದಾರೆ.



