ಮಂಗಳೂರಿನಲ್ಲಿ ಸರಣಿ ಕೊಲೆ ಮತ್ತು ಆನಂತರ ಬೆಳವಣಿಗೆಯ ಪರಿಣಾಮ ಕೋಮು ದ್ವೇಷದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸರ್ವಧರ್ಮಗಳ ಪ್ರಮುಖರು, ಸಂಘ-ಸಂಸ್ಥೆಗಳ ಪ್ರಮುಖರು, ಶಾಸಕರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಯಿತು.

ಹಲವು ಪ್ರಮುಖರು ತಮ್ಮವಿಚಾರಗಳನ್ನು ಹೇಳಿ ಶಾಂತಿ ಸೌಹಾರ್ದಕ್ಕೆ ಏನೇನು ಆಗಬೇಕೆಂದು ಸಲಹೆಗಳನ್ನು ನೀಡಿದ್ದಾರೆ. ಎಳೆಯ ಮಕ್ಕಳಲ್ಲಿ ವಿಷಬೀಜ ಬಿತ್ತಬೇಡಿ. ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ನಮ್ಮ ಪೂಜಾಪದ್ಧತಿಯೇ ಶ್ರೇಷ್ಠ ನಮ್ಮ ಧರ್ಮವೇ ಶ್ರೇಷ್ಠ ಉಳಿದದ್ದೆಲ್ಲ ಕನಿಷ್ಠ ಎಂದು ಬೋಧಿಸುವುದು ಮಕ್ಕಳ ಮನಸ್ಸಿನಲ್ಲಿ ಮೂಲಭೂತವಾದ ಬಿತ್ತುತ್ತದೆ. ಎಲ್ಲರ ಮನೆಗಳಲ್ಲಿ, ಎಲ್ಲ ಕಡೆಯ ಶಾಲೆಗಳಲ್ಲೂ ಎಲ್ಲ ಧರ್ಮಗಳೂ ಒಂದೇ ಎನ್ನುವ ಸೌಹಾರ್ದ ಭಾವನೆ ಬಿತ್ತಬೇಕು. ಹಾಗಾದಾಗ ಮಾತ್ರ ಶಾಂತಿ, ಸಾಮರಸ್ಯ ನೆಲೆಸಬಹುದು ಎಂದು ವಿಶ್ವ ಹಿಂದು ಪರಿಷತ್ ಪ್ರಮುಖ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂಬಿ ಪುರಾಣಿಕ್ ಹೇಳಿದ್ದಾರೆ.



