ದೇಶದಲ್ಲಿ ಉದ್ಯೋಗಾವಕಾಶ ಹಾಗೂ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಹಾಗೂ ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರಕಾರ ಉತ್ಪಾದನಾ ವಲಯದ ಮೂಲಕ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿದೆ ಎಂದು ಭವಿಷ್ಯ ನಿಧಿ ಸಂಘಟನೆಯ ಉಡುಪಿ ಪ್ರಾದೇಶಿಕ ಕಚೇರಿಯ ಭವಿಷ್ಯನಿಧಿ ಆಯುಕ್ತ ಶಶಿಕಾಂತ್ ದಹಿಯಾ ತಿಳಿಸಿದ್ದಾರೆ. 
ಉಡುಪಿಯ ಪಿಎಫ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ಯೋಜನೆ ಇದೇ ಬರುವ ಆಗಸ್ಟ್ ತಿಂಗಳ ಮೊದಲ ದಿನದಿಂದ ದೇಶಾದ್ಯಂತ ಜಾರಿ ಗೊಳ್ಳಲಿದೆ. ಆ.1ರಿಂದ ಹೊಸದಾಗಿ ಉದ್ಯೋಗ ಪಡೆಯುವವರಿಗೆ ಎರಡು ವರ್ಷಗಳ ಅವಧಿಗೆ ಹಾಗೂ ಉದ್ಯೋಗದಾತರಿಗೆ ಇನ್ನೂ ಎರಡು ಹೆಚ್ಚುವರಿ ವರ್ಷಗಳಿಗೆ ಇದು ಅನ್ವಯಿಸಲಿದೆ ಎಂದ್ರು. ಈ ಯೋಜನೆಯ ಪ್ರಯೋಜನಗಳು 2025ರ ಆಗಸ್ಟ್ 01ರಿಂದ 2027ರ ಜುಲೈ 31ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಅನ್ವಯವಾಗುತ್ತವೆ. ಈ ಯೋಜನೆಯಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಿಗಳು ಒಂದು ತಿಂಗಳ ವೇತನವನ್ನು ಪಡೆಯುತ್ತಾರೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಒಂದು ಅವಧಿಯಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಉತ್ಪಾದನಾ ವಲಯಕ್ಕೆ ಇನ್ನೂ ಎರಡು ವರ್ಷಗಳವರೆಗೆ ವಿಸ್ತೃತ ಪ್ರಯೋಜನ ನೀಡಲಾಗುತ್ತದೆ ಎಂದು ಪರಿವರ್ತನಾಧಿಕಾರಿ ಸುನಿಲ್ರಾವ್ ವಿವರಿಸಿದ್ರು.



