ಕರಾವಳಿಯಾದಂತ್ಯ ನಿನ್ನೆ ಒಂದೇ ದಿನ ಜೋರಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದ್ದು, ಕರಾವಳಿ ಭಾಗದಲ್ಲಿ ಸಾಕಷ್ಟು ಅವಾಂತರವನ್ನೇ ಸೃಷ್ಟಿಸಿದೆ.

ಸರ್ಕ್ಯೂಟ್ ಹೌಸ್ನಿಂದ ಬಿಜೈ ಬರುವ ರಸ್ತೆಯ ಮೇಲಿನ ಗುಡ್ಡ ಕುಸಿತದ ಪರಿಣಾಮ ದ್ವಿಮುಖ ಸಂಚಾರ ಅಸಾಧ್ಯವಾಗಿದೆ. ಇದೀಗ ಆ ಮಾರ್ಗವಾಗಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಡ್ಡೆ ಜರಿದ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಏಕ ಮುಖ ಸಂಚಾರ ವಾಹನಗಳು ನಡೆಸುವ ಕಾರಣ ಸರದಿ ಉದ್ದಕ್ಕೂ ವಾಹನಗಳ ದಟ್ಟಣೆ ಉಂಟಾಗಿದ್ದು, ಸವಾರರು ಕಿರಿಕಿರಿ ಅನುಭವಿಸ್ತಾ ಇದ್ದಾರೆ.

ರಸ್ತೆಗೆ ದೊಡ್ಡದಾದ ಶಿಲೆ ಕಲ್ಲು ಉರುಳಿದ ಪರಿಣಾಮ ಇದರ ತೆರವು ಕಾರ್ಯಕ್ಕೆ ವಿಳಂಬವಾಗಬಹುದು. ಇನ್ನೂ, ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂ 75 ರ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ, ಗುಡ್ಡ ಕುಸಿದಿದ್ದು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈಗಾಗಲೇ ಮಣ್ಣು ತೆಗೆಯುವ ಕಾರ್ಯ ಆರಂಭವಾಗಿದೆ.

ಆದರೆ ಇನ್ನಷ್ಟು ಮಣ್ಣು ಕುಸಿಯುತ್ತಿದ್ದು, ಮಣ್ಣು ತೆಗೆಯುವ ಕಾರ್ಯ ಮಧ್ಯಾಹ್ನದವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಭೀಕರವಾಗಿ ಸುರಿದ ವರ್ಷಧಾರೆಯಿಂದ ಮೇರಿಹಿಲ್ ಬಳಿ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲೇ ನಿಲ್ಲಿಸಿದ ಒಂದು ಕಾರು ಮತ್ತು ಹಲವಾರು ಬೈಕುಗಳು ಜಖಂಗೊಂಡಿದೆ. ಗ್ಯಾರೇಜ್ ರಿಪೇರಿಗೆಂದು ಬಂದಿರುವ ಬೈಕ್ಗಳಿಗೆ ಹಾನಿ ಆಗಿದೆ.



