ಕೇವಲ ಎರಡು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ನಡೆದಿದೆ.

ಇದಕ್ಕೆ ಗಂಡನೇ ಕಾರಣ ಎಂದು ಯುವತಿ ಕಡೆಯವರು ಆರೋಪ ಮಾಡಿದ್ದಾರೆ. ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಪೂಜಾ (25) ನೇಣು ಬಿಗಿದುಕೊಂಡ ಯುವತಿಯಾಗಿದ್ದಾರೆ. ಪೂಜಾ ಹಾಗೂ ಕೆನ್ನಾಳು ಗ್ರಾಮದ ಅಭಿನಂದನ್ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಈ ಇಬ್ಬರು ಮದುವೆಯಾಗಿದ್ದು ಆದರೆ ಮದುವೆ ಬಳಿಕ ಗಂಡನ ಮನೆಯವರಿಂದ ಕಿರುಕುಳ ಆರೋಪವನ್ನು ಯುವತಿ ಕಡೆಯವರು ಮಾಡಿದ್ದಾರೆ.

ಇದು ಅಲ್ಲದೇ ನಿನ್ನೆ ರಾತ್ರಿ ಜೀವ ತೆಗೆದು ಬಳಿಕ ನೇಣು ಬಿಗಿದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಮೃತ ಪೂಜಾ ಸಂಬಂಧಿಕರಿಂದ ಪಾಂಡವಪುರದ ಪೊಲೀಸ್ ಠಾಣೆ ಮುಂಭಾಗ ಗದ್ದಲ ಏರ್ಪಟ್ಟಿತ್ತು. ಎಫ್ಐಆರ್ ದಾಖಲಿಸಲು ತಡ ಮಾಡ್ತಿರುವ ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ತಕ್ಷಣ ದೂರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.



