ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ನಿವಾಸಿ 21ವರ್ಷದ ಹೇಮಂತ್ ಆಚಾರ್ಯ ಎಂಬಾತನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಕಂಕನಾಡಿ ಪೋಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜುಲೈ 27ರಂದು ಹೇಮಂತ್ ಮನೆಯಿಂದ ನಾಪತ್ತೆಯಾಗಿದ್ದ, ಈ ಬಗ್ಗೆ ಜುಲೈ 28ರಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಹೇಮಂತ್ಗಾಗಿ ಹುಡುಕಾಟ ನಡೆದಿತ್ತು. ಇನ್ನು ಜುಲೈ 31ರಂದು ಮತ್ತೆ ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪ್ರಮುಖರಾದ ಸಂಪತ್ ಸುವರ್ಣ ಅವರ ಮುತುವರ್ಜಿಯಿಂದ ಈಶ್ವರ ಮಲ್ಪೆ ಅವರ ತಂಡವನ್ನು ಹಾಗೂ ಎನ್.ಡಿ.ಆರ್.ಎಫ್ ತಂಡವನ್ನು ಕರೆಸಿಕೊಂಡು ಅಗ್ನಿಶಾಮಕ ದಳದ ಜೊತೆ ಜಂಟಿಯಾಗಿ ಸ್ಥಳೀಯ ಈಜುಗಾರ ನಿಸಾರ್ ಅವರೊಂದಿಗೆ ಜಕ್ರಿಬೆಟ್ಟುವಿನಿಂದ ತುಂಬೆವರೆಗೂ ಶೋಧ ನಡೆಸಿತ್ತು. ಅದರಲ್ಲಿ ಯಾವುದೇ ರೀತಿಯ ಪ್ರಯೋಜನವಾಗಿರದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ತುಂಬೆ ಡ್ಯಾಂ ನಿಂದ ಕೆಳಭಾಗದಲ್ಲಿ ಮೂರು ತಂಡಗಳ ಜೊತೆಯಲ್ಲಿ ಡ್ರೋನ್ ಬಳಸಿ ಶೋಧ ಕಾರ್ಯ ನಡೆಸಲಾಗಿತ್ತು. ಸಂಜೆ ವೇಳೆ ಡ್ರೋನ್ನ ಕಣ್ಣಿಗೆ ಶವವೊಂದು ತೇಲಾಡುವ ಕಂಡಿದ್ದು, ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ತಂಡ ಈತನ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದೆ.



