ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟಿ.ಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿ ಮಾರುಥಿ ವೀಥಿಕಾದಲ್ಲಿ ಸಂಭವಿಸಿದೆ.

ಮೃತಚಾಲಕನನ್ನು ಕಾರ್ಕಳ ನೀರೆ ಬೈಲೂರಿನ 65ವರ್ಷದ ಮೊಯ್ದಿನ್ ಬಾವ ಎಂದು ಗುರುತಿಸಲಾಗಿದೆ. ಟಿಟಿ ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಮೊಯ್ದಿನ್ ಅವರಿಗೆ ಏಕಾಏಕಿಯಾಗಿ ಎದೆ ನೋವು ಕಾಣಿಸಿಕೊಂಡಿದೆ. ಮಾರುಥಿ ವೀಥಿಕಾದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಕಂಡು ವಾಹನ ನಿಲ್ಲಿಸಿ ಎದೆನೋವಿನ ವಿಚಾರವನ್ನು ಒಳಕಾಡು ಅವರಲ್ಲಿ ಹೇಳಿಕೊಂಡಿದ್ದಾರೆ. ತಕ್ಷಣ ಒಳಕಾಡು ಅವರು ಅಂಬುಲೆನ್ಸ್ ವಾಹನದಲ್ಲಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ರು. ಆದರೆ ಪರೀಕ್ಷಿಸಿದ ವೈದ್ಯರು ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಒಳಕಾಡು ಅವರು ತುರ್ತು ಸಂದರ್ಭದಲ್ಲಿ ಚಾಲಕನಿಗೆ ಕಂಡಿದ್ದರಿಂದ ದುರಂತವೊಂದು ತಪ್ಪಿದಂತಾಗಿದೆ.



