ಹೊಸದಾಗಿ ನಿರ್ಮಿತವಾಗಿ ಸಂಚಾರಕ್ಕೆ ಮುಕ್ತವಾಗಿರುವ ಕಲ್ಲಡ್ಕ ಮೇಲ್ಸತುವೆಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಇನ್ನೊಂದು ಲಾರಿ ಡಿಕ್ಕಿ ಹೊಡೆದ ಘಟನೆ ಇಂದು ಬೆಳ್ಳಂಬೆಳ್ಳಗೆ ನಡೆದಿದೆ.

ಚಾಲಕ ಉಪ್ಪಿನಂಗಡಿ ನಿವಾಸಿ ಖಲೀಲ್ ಎಂಬಾತ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದು, ಆತನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಕಂಪೆನಿಯೊಂದರ ಐಸ್ಕ್ರೀಮ್ ಸಾಗಿಸುವ ಪ್ರೀಝರ್ ವಾಹನ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣ ಜಖಂಗೊಂಡಿದೆ. ಕಳೆದ ಎರಡು ದಿನಗಳಿಂದ ಲಾರಿಯೊಂದು ಕಲ್ಲಡ್ಕ ಪ್ಲೈ ಓವರ್ ಮೇಲೆ ಕೆಟ್ಟು ನಿಂತಿದ್ದು, ಲಾರಿ ಚಾಲಕನಿಗೆ ಮುಂಜಾನೆ ವೇಳೆ ಕಣ್ಣಿಗೆ ಕಾಣದೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಹೊಸ ಪ್ಲೈ ಓವರ್ನಲ್ಲಿ ಇನ್ನು ಕೂಡ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಬೀದಿ ದೀಪಗಳನ್ನ ಆಳವಡಿಸಲಾಗಿಲ್ಲ. ಜೊತೆಗೆ ಕೆಟ್ಟು ನಿಂತ ಲಾರಿಗೆ ಯಾವುದೇ ಸೂಚನ ಫಲಕ ಕೂಡ ಅಳವಡಿಸಿರಲಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿವೆ. ಇನ್ನು ಘಟನಾ ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.



