ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪುಕಲ್ಲು ಹಾಗೂ ಮರಳಿನ ತೀವ್ರ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಶಾಸಕ ವೇದವ್ಯಾಸ ಕಾಮತ್ರವರು ಸರ್ಕಾರದ ಗಮನ ಸೆಳೆದಿದ್ದಾರೆ.

ಬಿಜೆಪಿ ಹಿರಿಯ ಶಾಸಕ ಸುನಿಲ್ ಕುಮಾರ್ ಅವರ ಮಾತಿಗೆ ಧ್ವನಿಗೂಡಿಸಿದ ಶಾಸಕರು, ಗಣಿ ಇಲಾಖೆಯ ಅಧಿಕಾರಿಗಳು ಮಂಗಳೂರಿನ ವಸ್ತುಸ್ಥಿತಿ ಅರಿಯದೇ ಬೆಂಗಳೂರಿನಲ್ಲಿ ಕೂತು ಕಾನೂನು ರೂಪಿಸಿದರೆ ಇನ್ನಷ್ಟು ಗೊಂದಲಗಳೇ ಹೆಚ್ಚುವುದಲ್ಲದೇ ಪರಿಹಾರ ಸಿಗುವುದಿಲ್ಲ. ಎಲ್ಲಾ ಅಧಿಕಾರಿಗಳು ಮಂಗಳೂರಿಗೆ ಬಂದು ವಾಸ್ತವ ಅಂಶಗಳನ್ನು ತಿಳಿದುಕೊಂಡು ನೀತಿ ನಿಯಮ ರೂಪಿಸುವಂತಾಗಲಿ. ಜನಪ್ರತಿನಿಧಿಗಳಾದ ನಮ್ಮನ್ನು ಆಹ್ವಾನಿಸದೇ ಈ ಬಗ್ಗೆ ಎರಡು ಮೂರು ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಅದಕ್ಕೆ ಪೂರಕವಾಗಿ ಹೊಂದಿಕೊಂಡಂತಹ ಆರ್ಥಿಕ ವ್ಯವಸ್ಥೆಯೂ ಹದಗೆಟ್ಟಿದೆ. ಕೂಲಿ ಕಾರ್ಮಿಕರ ಸ್ಥಿತಿಯಂತೂ ಹೇಳತೀರದಾಗಿದೆ. ದಯವಿಟ್ಟು ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನಮ್ಮ ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಡಿ ಎಂದು ಶಾಸಕರು ಆಗ್ರಹಿಸಿದ್ರು.



