ಭಾರತದ ಜೊತೆ ಅತಿಹೆಚ್ಚು ಗಡಿಭಾಗವನ್ನು ಹಂಚಿಕೊಳ್ಳುವ ನೇಪಾಳ ದೇಶ, ಯಾವ ವಿಚಾರಕ್ಕೂ ಹೆಚ್ಚು ಸದ್ದು ಮಾಡದೇ ಸದಾ ಶಾಂತ ರೀತಿಯಿಂದಲೇ ಇರುವಂತೆ ತೋರುತಿತ್ತು.
ಸಣ್ಣ ದೇಶವಾದರೂ ತನ್ನ ಬಲಿಷ್ಠ ಸೇನಾ ಪಡೆಯಿಂದ ವಿಶ್ವದ ಹುಬ್ಬೇರುವಂತೆ ಮಾಡಿರುವ ನೇಪಾಳ, ತನ್ನೊಳಗೆ ಹತ್ತಾರು ಅಚ್ಚರಿಯ ಸಂಗತಿಗಳನ್ನು ಬಚ್ಚಿಟ್ಟು ಜಗತ್ತಿಗೆ ಸರಳ, ಸಜ್ಜನಿಕೆಯ ರಾಷ್ಟ್ರದಂತೆ ತನ್ನನ್ನು ತಾನು ಬಿಂಬಿಸಿಕೊ0ಡಿತ್ತು. ಆದರೆ ಇತ್ತೀಚಿಗೆ ಜೆನ್-ಝೀ ಗಳು, ಅಂದರೆ ಸುಮಾರು 1996 ರಿಂದ 2010ರ ನಡುವೆ ಜನಸಿದ ಯುವಜನಾಂಗ ನೇಪಾಳದಲ್ಲಿ ಕೈಗೊಂಡ ಭೀಕರ ಧ0ಗೆಯಿಂದ ಅಲ್ಲಿನ ಅತಂತ್ರ ಮತ್ತು ಭ್ರಷ್ಟ ಪ್ರಜಾಪ್ರಭುತ್ವದ ಸ್ಪಷ್ಟ ಚಿತ್ರಣಗಳು ಜಗತ್ತಿನ ಮುಂದೆ ಬಯಲಾಗಿದೆ. ಬಿಸಿರಕ್ತದ ಯುವಜನತೆ ಸರಕಾರದ ವಿರುದ್ಧ ಕೈಗೊಂಡ ಈ ಕ್ಷಿಪ್ರ ಕ್ರಾಂತಿಯಿ0ದ ಕೇವಲ 36 ಗಂಟೆಗಳಲ್ಲಿ ನೇಪಾಳ ಸರಕಾರ ಉರುಳಿ ಬಿದ್ದಿದೆ. ಇದು ಜಗತ್ತಿನ ಇತಿಹಾಸದಲ್ಲಿಯೇ ಭ್ರಷ್ಟಾಚಾರದ ವಿರುದ್ಧ ನಡೆದ ಅತ್ಯಂತ ದೊಡ್ಡ ಮತ್ತು ಭೀಕರ ಕ್ರಾಂತಿ ಎಂದು ಕೂಡ ಹೇಳಲಾಗುತ್ತಿದೆ. ಜೆನ್-ಝೀ ಗಳ ಈ ಹೋರಾಟ ಪ್ರಜಾಪ್ರಭುತ್ವದ ಅಸಲಿ ಧ್ಯೇಯದ ಪರಿಪಾಠವನ್ನು ಇಡೀ ಜಗತ್ತಿಗೆ ಮಾಡಿದೆ ಎಂದರೆ ತಪ್ಪಾಗದು. ಪ್ರಜೆಗಳಿಂದಲೇ ಆಯ್ಕೆಯಾಗಿ ಪ್ರಜೆಗಳ ಒಳಿತಿಗೆ ಶ್ರಮಿಸಬೇಕಾದ ರಾಜಕೀಯ ನಾಯಕರು ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡು ಪ್ರಜೆಗಳಿಗೆ ತೊಂದರೆಯಾಗಿ ಕಾಡಿದ ಪರಿಣಾಮ ನೇಪಾಳ ಇಂತಹದೊ0ದು ಭೀಕರ ಧ0ಗೆಗೆ ಸಾಕ್ಷಿಯಾಗಿದೆ. ಸದಾ ದೇಶದ ರಾಜಕೀಯದ ಬಗ್ಗೆ ನಿರ್ಲಕ್ಷ್ಯ ತೋರುವ ನೇಪಾಳದ ಯುವಜನತೆ ಇದೀಗ ದೇಶದ ಭ್ರಷ್ಟ ರಾಜಕೀಯ ವ್ಯವಸ್ಥೆಯ ಬೇರನ್ನು ಕಿತ್ತೊಗೆಯಲು ಪಣತೊಟ್ಟು ನಿಂತತೆ ತೋರುತ್ತಿದೆ. ಇದೀಗ ನೇಪಾಳದ ಜೆನ್-ಝೀ ಧ0ಗೆ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ತಮ್ಮ ದೇಶದ ಭ್ರಷ್ಟ ಸರಕಾರದ ವಿರುದ್ದ ಸಿಡಿದು ನಿಲ್ಲುವಂತೆ ಪ್ರೇರೇಪಿಸಿದೆ.
ಹಳೆ ಕಾಲದ ಭ್ರಷ್ಟ ರಾಜಕೀಯ ನಾಯಕರು, ಅವರ ವಂಶದವರನ್ನ ಒಳಗೊಂಡ ರಾಜಕೀಯ ವ್ಯವಸ್ಥೆ ಇದು ಬಹುಪಾಲು ಪ್ರಜಾಪ್ರಭುತ್ವ ರಾಷ್ಟ್ರಗಳ ದುಸ್ಥಿತಿ. ಪ್ರಜೆಗಳಿಂದ ನಡೆಯಬೇಕಾದ ದೇಶ ಇಂತಹ ಕೆಲವು ನಾಯಕರಿಗೆ ಸೀಮಿತವಾಗಿಬಿಟ್ಟಿದೆ. ಇಂತಹ ಹಳೆ ಕಾಲದ ನಾಯಕರು ಯುವಜನತೆಯನ್ನು ಅರ್ಥೈಸಿಕೊಂಡು ಅವರಿಗೆ ಹೊಂದಿಕೊಳ್ಳದ ಪರಿಣಾಮವೇ ನೇಪಾಳ ಸದ್ಯ ಜೆನ್-ಝೀ ಧ0ಗೆಯ ಉರಿಯಲ್ಲಿ ಬೇಯುತ್ತಿದೆ. ಸೆಪ್ಟೆಂಬರ್ 7 ರಂದು ನೇಪಾಳದ ಪರಿಸ್ಥಿತಿ ಸುಗಮವಾಗಿಯೇ ಇತ್ತು, ಆದರೆ ಯಾವಾಗ ಸರಕಾರ ಫೇಸ್ಬುಕ್, ಯೂಟ್ಯೂಬ್ ಹೀಗೆ ಪ್ರಮುಖ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರುವ ಅರ್ಥಹೀನ ನಿರ್ಧಾರ ಕೈಗೊಂಡ ಕೂಡಲೇ ಯುವಕರ ಬಿಸಿ ರಕ್ತದ ಕಿಚ್ಚು ಇಡೀ ನೇಪಾಳವನ್ನ ಆವರಿಸಿತ್ತು. ಜಗತ್ತು ಪೂರ್ತಿ ಮೊಬೈಲ್ ಮಯವಾಗಿದೆ, ಅದರಲ್ಲೂ ಯುವಜನತೆಗೆ ಸೋಶಿಯಲ್ ಮೀಡಿಯಾ ಇಲ್ಲದೇ ಹೋದರೆ ಉಸಿರೇ ಇಲ್ಲದಂತಾಗುತ್ತದೆ. ಫೇಸ್ಬುಕ್ ಮುಂತಾದ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಿಂದ ನೇಪಾಳದ ಜನ ಆದಾಯ ಕೂಡ ಗಳಿಸುತ್ತಿದ್ದರು. ಯುವಕರು ತಮ್ಮ ಬಹುಪಾಲು ಸಮಯವನ್ನು ಅದರಲ್ಲೇ ಕಳೆಯುತ್ತಿದ್ದರು. ಆದರೆ ಸರಕಾರದ ಈ ನಿರ್ಬಂಧವನ್ನು ನೇಪಾಳದ ಯುವಕರು ತಮ್ಮ ಸ್ವಾತಂತ್ರ್ಯಕ್ಕೆ ತಡೆ ಎಂದು ಭಾವಿಸಿ ಕ್ಷಣಾರ್ಧದಲ್ಲಿ ಇಡೀ ಸರಕಾರವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಪಾರ್ಲಿಮೆಂಟ್, ರಾಷ್ಟ್ರಪತಿ ಭವನ ಹೀಗೆ ಪ್ರತಿಯೊಂದಕ್ಕೂ ಬೆಂಕಿ ಹಚ್ಚಿ ತಮ್ಮ ಆಕ್ರೋಶದ ತೀವ್ರತೆಯನ್ನು ಹೊರಹಾಕಿದ್ದಾರೆ. ತಮ್ಮಿಂದ ಆಯ್ಕೆಯಾದ ನಾಯಕರು ತಮಗೆ ತೊಂದರೆಯಾಗಿ ಕಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ತಮ್ಮ ಪ್ರಾಣವನ್ನೂ ಕೂಡ ಲೆಕ್ಕಿಸದೆ ಸರಕಾರದ ವಿರುದ್ದ ಬಹುದೊಡ್ಡ ಕ್ರಾಂತಿಯನ್ನೇ ಕೈಗೊಂಡಿದ್ದಾರೆ. ಸಿರಿಯಾ, ಶ್ರೀಲಂಕಾ, ಬಾಂಗ್ಲಾದೇಶ ಹೀಗೆ ಸಾಕಷ್ಟು ದೇಶಗಳಲ್ಲಿ ಇಂತಹ ನಾಗರಿಕ ಧ0ಗೆಗಳು ನಡೆದಿವೆ, ಆದರೆ ಅತಂತ್ರ ಪ್ರಜಾಪ್ರಭುತ್ವದ ವಿರುದ್ಧ ನಡೆದ ನೇಪಾಳದ ಜೆನ್-ಝೀ ಧ0ಗೆ ಇವುಗಳಿಗಿಂತ ಹೆಚ್ಚು ಪ್ರಭಾವವನ್ನು ಜಗತ್ತಿನ ಮೇಲೆ ಬೀರಿದೆ. ಇಡೀ ಜಗತ್ತಿನ ವಿವಿಧ ದೇಶಗಳ ಭ್ರಷ್ಟ ರಾಜಕೀಯ ನಾಯಕರ ಎದೆಯಲ್ಲಿ ಸಣ್ಣದೊಂದು ನಡುಕ ಹುಟ್ಟುವಂತೆ ಮಾಡಿದೆ. ಈ ಧ0ಗೆಯ ಮೂಲಕ ನೇಪಾಳದ ಯುವಕರು ಪ್ರಜೆಗಳ ಹಿತಾಸಕ್ತಿಗೆ ಶ್ರಮಿಸಬೇಕಾದ ನಾಯಕರು ಅದಕ್ಕೆ ಅಡ್ಡಿವುಂಟು ಮಾಡಿದರೆ, ತಕ್ಕ ತಿರುಗೇಟು ನೀಡಲು ಪ್ರಜೆಗಳು ಶಕ್ತರು ಎಂಬ ದೃಢ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.
ಚೇತನ್ ಕಾಶಿಪಟ್ನ
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…