ಹುಣಸೂರು ತಾಲೂಕಿನ ಹಲವಾರು ಕಡೆ ಹುಲಿ ಉಪಟಳ ಮುಂದುವರೆದಿದ್ದು, ಹಾಡಹಗಲೇ ಹುಲಿ ದಾಳಿಗೆ ಎರಡು ಹಸುಗಳು ಸಾವನ್ನಪ್ಪಿದೆ.

ಹನಗೋಡು ಹೋಬಳಿಯ ಕಾಮಗೌಡನಹಳ್ಳಿ ಗ್ರಾಮದ ರೈತ ಮಾದೇಗೌಡರವರಿಗೆ ಸೇರಿದ ಎರಡು ಹಸುಗಳನ್ನು ಹುಲಿಗಳು ದಾಳಿ ಮಾಡಿ ಬಲಿ ಪಡೆದಿವೆ. ಹೊಲದಲ್ಲಿ ಹಸುಗಳನ್ನು ಮೇಯಲು ಬಿಟ್ಟು, ರೈತ ಮಹದೇವ ನೀರು ಕುಡಿಯಲು ಬೇರೆಡೆಗೆ ಹೋಗಿದ್ದ ಸಮಯದಲ್ಲಿ ದಾಳಿ ನಡೆದಿದೆ. ಇನ್ನು ಹಸುಗಳ ಮೇಲಿನ ಹುಲಿ ದಾಳಿಯನ್ನು ಕಂಡ ರೈತ ಮಹದೇವ ಗಾಬರಿಯಾಗಿ ಅಕ್ಕ ಪಕ್ಕದ ಜಮೀನಿನಲ್ಲಿದ್ದ ರೈತರನ್ನು ಕರೆದುಕೊಂಡು ಸ್ಥಳಕ್ಕೆ ಬಂದಿದ್ದಾರೆ.

ರೈತರು ಕೂಗಿಕೊಳ್ಳುತ್ತಿದ್ದಂತೆ ಹುಲಿಗಳು ಪೊದೆಯೊಳಗೆ ಸೇರಿಕೊಂಡಿವೆ. ತಾಯಿ ಹುಲಿಯೊಂದಿಗೆ ಮರಿ ಹುಲಿಯು ಸೇರಿ ಏಕಕಾಲದಲ್ಲಿ ಎರಡು ಹಸುಗಳ ಮೇಲೆ ದಾಳಿ ಮಾಡಿವೆ ಎನ್ನಲಾಗುತ್ತಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ.



