ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಹಾಗೂ ವಿಶ್ವವಿದ್ಯಾನಿಲಯದ ಸಂವರ್ಧನೆಗಾಗಿ ವಿಶೇಷ ನಿಯೋಗದ ರಚನೆಯಾಗಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯವು ಪ್ರಮುಖ ಸ್ಥಾನ ಹೊಂದಿತ್ತು. ಆದರೆ ಇಂದಿನ ವಿಶ್ವವಿದ್ಯಾನಿಲಯದ ಸ್ಥಿತಿ ಕಳವಳಕಾರಿ ಆಗಿದೆ. ಮಾನವಿಕ ಶಾಸ್ತ್ರಗಳಾದ ಸಮಾಜಶಾಸ್ತ್ರ, ತುಳು, ಕೊಂಕಣಿ, ಇತಿಹಾಸ ಮತ್ತು ಪುರಾತತ್ವದಂತಹ ಜನಪ್ರಿಯ ವಿಭಾಗಗಳನ್ನೇ ಮುಚ್ಚಲಾಗಿದೆ ಎಂದರು. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, 2024-25ನೇ ಸಾಲಿನಲ್ಲಿ 1876 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆ 1508ಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ 2013 ರಿಂದ 2017ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯವು 20 ಕೋಟಿಯಷ್ಟು ಅನುದಾನ ಪಡೆದಿತ್ತು. ಇದರಲ್ಲಿ 7 ಕೋಟಿಯನ್ನು ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದರೂ, ಅಲ್ಲಿ ಯಾವುದೇ ಹಾಸ್ಟೆಲ್ ನಿರ್ಮಾಣವಾಗದೇ ಹಣ ಮಾತ್ರ ಅಧಿಕಾರಿಗಳ ಕೈಸೇರಿದ್ಧು ಬಹಿರಂಗವಾಗಿದೆ ಎಂದರು. ಈ ಹಿನ್ನೆಲೆ ಪರಿಗಣಿಸಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಎಲ್ಲಾ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಲು ಸರ್ಕಾರ ತಕ್ಷಣ ವಿಶೇಷ ಸಮಿತಿ/ನಿಯೋಗವನ್ನು ರಚನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ನಿಕಟ ಪೂರ್ವ ಸದಸ್ಯರಾದ ರವಿ ಚಂದ್ರ, ರಮೇಶ್ ಕೆ, ಸಂಘಟನೆಯ ಸದಸ್ಯರಾದ ಶ್ರೀಜಿತ್ ರೈ, ಶ್ರೀ ಲಕ್ಷ್ಮೀ ಉಪಸ್ತಿತರಿದ್ದರು.



