ಮಾತೆ ಮಾತೆ ಎನ್ನುತ್ತಾ ಗೋವನ್ನು ಕಡಿದು ಗೋಮಾಂಸ ಮಾರಾಟ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರ ಅಡುಗೆ ಸಿಬ್ಬಂದಿಯರನ್ನೂ ಮಾತೆ ಮಾತೆ ಎನ್ನುತ್ತಾ ಸಂಬಳ ನೀಡದೆ ನಮ್ಮ ದೇಹದಲ್ಲಿ ರಕ್ತಮಾಂಸವೇ ಇಲ್ಲದಂತೆ ಮಾಡಿ ಬದುಕನ್ನೇ ನಾಶ ಮಾಡುತ್ತಿದೆ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಬಿ.ಎಂ.ಭಟ್ ಹೇಳಿದ್ದಾರೆ.

ಅವರು ಮಂಗಳೂರು ಕ್ಲಾಕ್ ಟವರ್ ಎದುರು ಬಿಸಿಯೂಟ ತಯಾರಕರ ಸಂಬಳ ಏರಿಕೆ ಕೆಲಸದ ಭದ್ರತೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಹೋರಾಟದ ದರಣಿಯನ್ನು ಉದ್ಘಾಟಿಸಿ ಮಾತಾನಾಡಿದ್ದಾರೆ. ಕಳೆದ 2014 ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ಕನಿಷ್ಟ ಸಂಬಳವನ್ನೂ ಏರಿಸದಿರುವುದು ಯಾವ ಸೀಮೆಯೆ ಬೇಟಿ ಬಚಾವೋ ಎಂದು ಟೀಕಿಸಿದ್ದಾರೆ.

ಬಿಸಿಯೂಟದವರು ಸೇವೆ ಮಾಡೋರೇ ವಿನಃ ಕೆಲಸಗಾರರಲ್ಲ ಎನ್ನುವ ಸರಕಾರದ ಶಾಸಕ ಸಂಸದರಿಗೆ ಯಾಕೆ ಲಕ್ಷ ಲಕ್ಷ ಸಂಬಳ ಕೊಡುತ್ತಿದೆ. ಅವರ ಮೊಬೈಲ್ ರಿಚಾರ್ಜಿಗೆ ತಿಂಗಳಿಗೆ ಕೊಡುವ 20,000 ದಷ್ಟನ್ನಾದರೂ ನಮಗೆ ಸಂಬಳ ಕೊಡಿ, ಗೃಹ ಲಕ್ಷ್ಮಿಯನ್ನೂ ನಮಗೆ ಸಂಬಳ ಎಂದು ಅಂಗೀಕರಿಸಿ ಕೊಡಿ ಎಂದು ಒತ್ತಾಯಿಸಿದ್ದಾರೆ. ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅವರು ಮಾತಾಡುತ್ತಾ ಊರಿನ ಮಕ್ಕಳಿಗೆ ಬಿಸಿಬಿಸಿ ಊಟ ತಯಾರಿಸಿ ಕೊಡುವ ತಾಯಂದಿಗೆ ತಮ್ಮ ಮಕ್ಕಳಿಗೆ ತಣ್ಣಗಿನ ಊಟ ಕೊಡವಷ್ಟೂ ಸಂಬಳ ನೀಡದ ಸರಕಾರಗಳ ವಿರುದ್ದ ನಮ್ಮ ಹೋರಾಟ ಎಂದಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಹೋರಾಟದಲ್ಲಿ ಪುತ್ತೂರು ತಾಲೂಕಿನ ಅಧ್ಯಕ್ಷರಾದ ರಂಜಿತ, ಕಾರ್ಯದರ್ಶಿ ಲತಾ, ಬೆಳ್ತಂಗಡಿ ತಾಲೂಕಿನ ಮುಖಂಡರಾದ ಸುನೀತ, ವಿನೋದ, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



