ಪತ್ರಿಕಾ ವಿತರಕರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಬೈಪಾಸ್ ಎಂಬಲ್ಲಿ ನಡೆದಿದೆ. ಬಂಟ್ವಾಳ ಬಡ್ಡಕಟ್ಟೆ ದೈವಗುಡ್ಡೆ ನಿವಾಸಿ ಪ್ರಶಾಂತ್ ಬಾಳಿಗಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.

ಇವರು ಬಂಟ್ವಾಳ ಪೇಟೆಯಲ್ಲಿ ಚಿರಪರಿಚಿತ ಮತ್ತು ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಅನೇಕ ವರ್ಷಗಳಿಂದ ಪೇಪರ್ ಮತ್ತು ಹಾಲು ವಿತರಕರಾಗಿದ್ದು ಸಂಜೆ ವೇಳೆ ಪಿಗ್ಮಿ ಸಂಗ್ರಹಕಾ ವೃತ್ತಿಯನ್ನು ಮಾಡಿಕೊಂಡಿದ್ದರು. ಎಂದಿನಂತೆ ಮನೆಯಿಂದ ಪೇಪರ್ ಮತ್ತು ಹಾಲನ್ನು ಮನೆಮನೆಗೆ ವಿತರಣೆ ಮಾಡಲು ಹೊರಟವರು ಸ್ವಲ್ಪ ಹೊತ್ತು ಕೆಲ ಮನೆಗಳಿಗೆ ಹಾಲು ಮತ್ತು ಪೇಪರ್ ಹಾಕಿದ್ದಾರೆ. ಸುಮಾರು ಬೆಳಿಗ್ಗೆ 5 ಗಂಟೆಯಿಂದ 8 ಗಂಟೆಯ ಅವಧಿಯಲ್ಲಿ ಬೈಪಾಸ್ನ ಬಾವಿಯೊಂದಕ್ಕೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ರಸ್ತೆ ಬದಿಯಲ್ಲಿ ಇವರ ಬೈಕ್ ಅನಾಥವಾಗಿ ನಿಂತಿರುವುದನ್ನು ಸಾರ್ವಜನಿಕರು ಕಂಡು ಅನುಮಾನಗೊಂಡು ಬಾವಿಯಲ್ಲಿ ನೋಡಿದಾಗ ಮೃತದೇಹ ತೇಲಾಡುವ ಸ್ಥಿತಿಯಲ್ಲಿತ್ತು. ಸ್ಥಳೀಯರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಂಟ್ವಾಳ ನಗರ ಪೋಲೀಸ್ ಇನ್ಸ್ಪೆಕ್ಟರ್ ಆನಂತಪದ್ಮನಾಭ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಂಧುಗಳನ್ನು ಅಗಲಿದ್ದಾರೆ.



