ಉಳ್ಳಾಲ : ಪಾವೂರು ಗ್ರಾಮದ ಅಜಿರುಳಿಯದಿಂದ ಪಾದೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ.

ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಅಜಿರುಳಿಯದಿಂದ ಪಾದೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸಗೈದಿದ್ದಾರೆ. ಬಳಿಕ ಮಾತನಾಡಿದ ಅವರು ಇಲ್ಲಿ ಖಾಸಗಿ ಜಾಗವೇ ಇರುವುದರಿಂದ ರಸ್ತೆ ನಿರ್ಮಾಣ ಸವಾಲಾಗಿತ್ತು. ಆದರೆ ಸ್ಥಳೀಯ ಹೃದಯ ವೈಶಾಲ್ಯವುಳ್ಳವರು ಜಾಗವನ್ನು ಬಿಟ್ಟುಕೊಟ್ಟ ಕಾರಣ ಸ್ಪೀಕರ್ ಬಳಿ ಮಾತುಕತೆ ನಡೆಸಿದಾಗ ಅವರೇ ಸ್ಥಳ ಪರಿಶೀಲಿಸಿ ಮೊದಲ ಹಂತದ ಕಾಮಗಾರಿಗೆ ಅನುದಾನ ನೀಡಿದ್ದಾರೆ ಎಂದರು. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ದೋಟಕ್ಕೆ ರಸ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಶಾಸಕರು ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿ 40 ಕೋಟಿ ಅನುದಾನ ಮೀಸಲಿಟ್ಟಿದ್ದು ನಾಲ್ಕೈದು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ. ಈಗ ಆಗುವ ರಸ್ತೆ ಗಾಡಿಗದ್ದೆ ಭಂಡಾರಮನೆ ಸಂಪರ್ಕ ಕಲ್ಪಿಸಲಿದೆ ಎಂದು ತಿಳಿಸಿದರು. ಇನ್ನು ಈ ಸಂಧರ್ಭದಲ್ಲಿ ಪಾವೂರು ಗ್ರಾಮ ಪಂಚಾಯಿತಿಯ ಸ್ಥಳೀಯ ಸದಸ್ಯರಾದ ರಿಯಾಝ್ ಅಹ್ಮದ್ ಪಾವೂರು, ರವಿಕಲಾ, ಮಾಜಿ ಸದಸ್ಯರಾದ ಚೆನ್ನಮ್ಮ, ಎಂ.ಪಿ.ಹಸನ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



