ಹಿಂದೂ ಚೆನ್ನಾಗಿರುವಲ್ಲಿ ಯಾವುದೇ ಸಮಸ್ಯೆ ಇಲ್ಲವಾಗಿದ್ದು, ಹಿಂದೂ ದುರ್ಬಲನಾದಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ.

ಹೀಗಾಗಿ ಹಿಂದೂ ಸಮಾಜ ಸಂಘಟಿತವಾದಾಗ ಜಗತ್ತಿನಲ್ಲಿ ಶಾಂತಿ- ಸಾಮರಸ್ಯ ನೆಲೆಸುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕ ಅರುಣ್ ಕುಮಾರ್ ಹೇಳಿದ್ದಾರೆ. ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ವಠಾರದಲ್ಲಿ ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಫರಂಗಿಪೇಟೆ ಮಂಡಲದ ವತಿಯಿಂದ ನಡೆದ ಹಿಂದೂ ಸಂಗಮ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ್ದಾರೆ.

ಪ್ರಸ್ತುತ ಜಾಗತಿಕ ಗೂಂಡಾಗಿರಿ ನಡೆಯುತ್ತಿದ್ದು, ಸಾಕಷ್ಟು ದೇಶಗಳು ಹೊಡೆತಗಳನ್ನು ತಿಂದಿವೆ. ಆದರೆ ಭಾರತ ತನ್ನ ಪರಿಮಾಣು ಶಕ್ತಿಯ ಫಲವಾಗಿ ಭದ್ರವಾಗಿದೆ. ದೇಶದೊಳಗಿನ ವಿಕೃತ ಮನಸ್ಸುಗಳು ಕೂಡ ದೇಶದ ನಾಯಕತ್ವವನ್ನು ಪ್ರಶ್ನಿಸಿ ಸುಳ್ಳು ಆರೋಪಗಳನ್ನು ಹೊರಿಸಿ ಪ್ರಚೋದಿಸುವ ಕಾರ್ಯ ನಡೆಯುತ್ತಿದೆ.

ಹಲವು ಕಾರಣಕ್ಕೆ ಹಿಂದೂ ಸಮಾಜದ ಮೇಲೆ ದಾಳಿಗಳು ನಡೆಯುತ್ತಿದ್ದು, ನಮ್ಮ ಕುಟುಂಬದ ಮಂದಿ ಒಗ್ಗಟ್ಟಾಗಿ ಕೂತು ಮುಂದಿನ 25 ವರ್ಷಗಳ ಬಳಿಕ ನಮ್ಮ ಅಸ್ತಿತ್ವದ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ. ಸೂರ್ಯ- ಚಂದ್ರ ಇರುವವರೆಗೂ ಹಿಂದೂ ಸಮಾಜ ಇರಲಿದ್ದು, ಹೀಗಾಗಿ ಎಲ್ಲಾ ರೀತಿಯ ಆತಂಕಗಳನ್ನು ಬಿಟ್ಟು ಸಂಘಟಿತರಾಗಿ ನಮ್ಮ ಸಂಸ್ಕೃತಿ- ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸಬೇಕಿದೆ ಎಂದಿದ್ದಾರೆ.



