ಮುಲ್ಕಿ: ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಭೇಟಿ ನೀಡಿ ಬಳಿಕ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಸಭೆಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಶಾಸಕರಿಂದ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಬಂದಿದ್ದು ಆಪರೇಟ್ ಮಾಡಲು ಸಿಬ್ಬಂದಿ ಕೊರತೆ ಇದ್ದು ಸರಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ ಗ್ರಾಮೀಣ ಪ್ರದೇಶಗಳಿಂದ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಬರುವ ಜನರು ಆಸ್ಪತ್ರೆಯ ವೈದ್ಯರು ಸಹಿತ ಸಿಬ್ಬಂದಿಗಳು ಉಡಾಫೆ ವರ್ತನೆ ತೋರಿಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದು ಇದು ಯಾವುದೇ ಕಾರಣಕ್ಕೂ ಪುನರಾವರ್ತನೆಯಾಗಬಾರದು. ಕಳೆದ ಮೂರು ವರ್ಷಗಳಿಂದ ಆಸ್ಪತ್ರೆಗೆ ರವಾನೆಯಾಗುತ್ತಿರುವ ಔಷಧಿಗಳ ಲೆಕ್ಕ ಪತ್ರ ಬೇಕು ಹಾಗೂ ಔಷಧಿಗಳನ್ನು ಟೆಂಡರ್ ವಹಿಸಿಕೊಳ್ಳುವವರ ಬಗ್ಗೆ ಮಾಹಿತಿ ಬೇಕು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಕಾರಣ ಎಲ್ಲವೂ ಪಾರದರ್ಶಕವಾಗಿರಬೇಕು ಎಂದು ಸೂಚನೆ ನೀಡಿದರು.
ಆಸ್ಪತ್ರೆಯ ವೈದ್ಯರು ಸಹಿತ ಸಿಬ್ಬಂದಿಗಳು ಸರಿಯಾದ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕು ಎಂದು ವಾರ್ನಿಂಗ್ ನೀಡಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಸ್ತ್ರೀ ರೋಗ ತಜ್ಞೆ , ಹೆರಿಗೆ ತಜ್ಞರು,ಕುಡಿಯುವ ನೀರಿನ ಬಾವಿ, ವಿದ್ಯುತ್ ಸಮಸ್ಯೆ, ಹೈಮಾಸ್ಕ್ ಲೈಟ್ ಮತ್ತು ಆಸ್ಪತ್ರೆಯ ಜಾಗವನ್ನು ಗುರುತಿಸಿ ಅತಿಕ್ರಮಣವಾಗದಂತೆ ತಡೆಗೋಡೆ ನಿರ್ಮಾಣ ಬಗ್ಗೆ ಮನವಿ ಹಾಗೂ ಚರ್ಚೆ ನಡೆಯಿತು.
ಮುಲ್ಕಿ ತಹಶಿಲ್ದಾರ್ ಪ್ರದೀಪ್,ನ.ಪಂ ಮುಖ್ಯಾಧಿಕಾರಿ ಎನ್.ಎಂ ಮೇಸ್ತ,ಸದಸ್ಯರಾದ ಹರ್ಷರಾಜ ಶೆಟ್ಟಿ, ಸತೀಶ್ ಅಂಚನ್, ಸುಭಾಶ್ ಶೆಟ್ಟಿ,ಆರೋಗ್ಯ ಸುರಕ್ಷಾ ಸಮಿತಿಯ ಸದಸ್ಯರಾದ ನರಸಿಂಹ ಪೂಜಾರಿ,ಸತ್ಯೇಂದ್ರ ಶೆಣೈ ಜಿ.ಪಂ.ಜೂನಿಯರ್ ಇಂಜಿನಿಯರ್ ಪ್ರಶಾಂತ್ ಆಳ್ವ, ಕಂದಾಯ ಅಧಿಕಾರಿ ಅಶೋಕ್, ಡಾ.ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.



